ಆಯನೂರು: ಲೋಕಸಭಾ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಹಾಗೂ ಮತದಾನ ಶಾಂತಿಯುತವಾಗಿ ನಡೆಯಲಿ ಎಂಬ ಉದ್ದೇಶದಿಂದ ಆಯನೂರು ಹಾಗೂ ಹಾರನಹಳ್ಳಿ ಗ್ರಾಮಗಳಲ್ಲಿ ಸೋಮವಾರ ಪಥಸಂಚಲನ ನಡೆಸಲಾಯಿತು. ಕುಂಸಿ ಸಿಪಿಐ ಬಸವರಾಜ್, ಐಟಿಬಿಪಿ ಕಮಾಂಡರ್ ಶ್ರೀನಿವಾಸ್ ನೇತೃತ್ವದಲ್ಲಿ ಮಿಲಿಟರಿ ಪಡೆಯಿಂದ ಪಥ ಸಂಚಲನ ನಡೆಯಿತು. ಆಯನೂರಿನ ವಿನಾಯಕ ವೃತ್ತದಿಂದ ಆರಂಭಗೊಂಡು ಹಾರನಹಳ್ಳಿ ರಸ್ತೆ, ದುರ್ಗಾಂಬಾ ದೇವಸ್ಥಾನ, ತಾಂಡಾ, ಸಾಮಿಲ್ ರಸ್ತೆ, ರಾಷ್ಟ್ರೀಯ ಹೆದ್ದಾರಿ ಮೂಲಕ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಪಥ ಸಂಚಲನ ಪೊಲೀಸ್ ಠಾಣೆಯಲ್ಲಿ ಮುಕ್ತಾಯಗೊಂಡಿತು. ಹಾರನಹಳ್ಳಿ ಗ್ರಾಮದಲ್ಲಿ ದರ್ಗಾ ಮೂಲಕ ಸಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಪಿಎಸ್ಐ ಪಾರ್ವತಿ ಬಾಯಿ, ಹೆಡ್ ಕಾನ್ಸ್ಟೇಬಲ್ ಪ್ರಕಾಶ್ ಹಾಗೂ 50ಕ್ಕೂ ಹೆಚ್ಚು ಸಿಆರ್ಪಿಎಫ್ ಯೋಧರು ಇದ್ದರು.