ಸೇಡಂ: ಒಂದು ವರದಿಯಂತೆ ಹೆಚ್ಚಿನ ಜನರು ಕೃಷಿ ಕಾಯಕದಿಂದ ವಿಮುಖವಾಗುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಮುಂದಿನ ಕೆಲ ವರ್ಷಗಳಲ್ಲಿ ಕೃಷಿಕರಿಲ್ಲದಂತಾಗುತ್ತದೆ ಎಂದು ಕಲಬುರಗಿ, ಯಾದಗಿರಿ, ಬೀದರ್ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ವಿ.ಪಾಟೀಲ್ ಕಳವಳ ವ್ಯಕ್ತಪಡಿಸಿದರು.
ಶ್ರೀ ಸಿದ್ಧರಾಮೇಶ್ವರ ಫಂಕ್ಷನ್ ಹಾಲ್ನಲ್ಲಿ ಬುಧವಾರ ಆಯೋಜಿಸಿದ್ದ ಹಾಲು ವಿತರಕರ ಸಭೆಯಲ್ಲಿ ಮಾತನಾಡಿ, ರೈತ ದೇಶದ ಬೆನ್ನೆಲುಬು ಎನ್ನುತ್ತೇವೆ, ಆದರೆ ಇದೀಗ ಅಂತಹ ಅನ್ನದಾತ ಕೃಷಿ ಕೆಲಸಗಳಿಂದ ದೂರವಾಗುತ್ತಿದ್ದಾನೆ. ವಿದ್ಯಾವಂತರು ನೌಕರಿ ಅರಿಸಿ ಹೋಗುತ್ತಿದ್ದರಿಂದ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ. ಸುಮಾರು ೨೦ ವರ್ಷಗಳ ಹಿಂದೆ ಪ್ರತಿ ಮನೆಯಲ್ಲಿ ಕನಿಷ್ಠ ೫ ರಿಂದ ೧೦ ಹಸು, ಎಮ್ಮೆ ಇರುತ್ತಿದ್ದವು. ಈಗ ಜಾನುವಾರುಗಳೇ ಕಾಣುತ್ತಿಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ಹಾಲಿಗೆ ಬರಗಾಲ ಉಂಟಾಗಿದೆ. ನಾವು ಬೇರೆ ಒಕ್ಕೂಟದಿಂದ ಹಾಲು ತರಿಸಿ ವಿತರಣೆ ಮಾಡುತ್ತಿದ್ದೇವೆ. ಹೈನುಗಾರಿಕೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ. ಹಾಲು ನೀಡುವ ರೈತನಿಗೆ ಯೋಗ್ಯ ಬೆಲೆ ನೀಡಬೇಕು. ಗುಣಮಟ್ಟದ ಹಾಲು ನೀಡುವ ಯೋಜನೆ ರೂಪಿಸಿದ್ದು, ಶೀಘ್ರದಲ್ಲಿಯೇ ಮಾರುಕಟ್ಟೆಗೆ ಎಮ್ಮೆ ಹಾಲನ್ನು ಪರಿಚಯಿಸಲಾಗುವುದು ಎಂದರು.
ಮಾರುಕಟ್ಟೆ ವ್ಯವಸ್ಥಾಪಕ ಸಿ.ಕೆ ಪತ್ತಾರ, ಅಧಿಕಾರಿಗಳಾದ ಅವಿನಾಶ ಜಾಧವ್, ಶರಣ ಪಾಟೀಲ್, ಆಕಾಶ ರಾಠೋಡ್, ಉದಯಕುಮಾರ ಹಾಗೂ ವಿತರಕರಿದ್ದರು.