ನವದೆಹಲಿ: ಶನಿವಾರ ಮಂಡನೆಯಾದ ಕೇಂದ್ರ ಬಜೆಟ್ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಸಮಾಧಾನ ಹೊರಹಾಕಿದ್ದಾರೆ.
ಬಜೆಟ್ ಮಂಡನೆ ಮುಗಿದು ಸದನವನ್ನು ಮುಂದೂಡಿದ ಬೆನ್ನಲ್ಲೇ ಸಂಸತ್ ಹೊರಭಾಗದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ರಾಹುಲ್, ಬಹುಶಃ ಬಜೆಟ್ ಮಂಡನೆ ಇತಿಹಾಸದಲ್ಲೇ ಇದು ಸುದೀರ್ಘ ಸಮಯದ ಬಜೆಟ್ ಮಂಡನೆಯಾಗಿರಬೇಕು. ಆದರೆ, ಬಜೆಟ್ನಲ್ಲಿ ಏನೇನೂ ಇರಲಿಲ್ಲ. ಇದೊಂದು ಟೊಳ್ಳು ಬಜೆಟ್ ಆಗಿತ್ತು ಎಂದಿದ್ದಾರೆ.
ಮುಂದುವರಿದು ಮಾತನಾಡಿ, ನಿರುದ್ಯೋಗವೇ ಪ್ರಮುಖ ಸಮಸ್ಯೆಯಾಗಿದೆ. ನಮ್ಮ ಯುವಕರು ಉದ್ಯೋಗ ಪಡೆಯಲು ನೆರವಾಗುವ ಯಾವುದೇ ಕಾರ್ಯತಂತ್ರ ಯೋಜನೆಯನ್ನು ಬಜೆಟ್ನಲ್ಲಿ ನೋಡಲಿಲ್ಲ. ಸರ್ಕಾರ ಬಜೆಟ್ ಅನ್ನು ಚೆನ್ನಾಗಿ ವಿವರಿಸಿದೆ. ಹಿಂದಿನ ಬಜೆಟ್ ಅಂಶವನ್ನೇ ಮತ್ತೆ ಹೇಳಲಾಗಿದೆ. ಇದು ಸರ್ಕಾರದ ಮನಸ್ಥಿತಿಯನ್ನು ತೋರಿಸುತ್ತದೆ. ಎಲ್ಲವೂ ಕೂಡ ಕೇವಲ ಮಾತಾಗಿದ್ದು, ಯಾವುದು ಕೂಡ ನಡೆಯುವುದಿಲ್ಲ ಎಂದು ಟೀಕಿಸಿದ್ದಾರೆ. (ಏಜೆನ್ಸೀಸ್)