ಹೈದರಾಬಾದ್: ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ ನಕಲಿ ಪ್ರೋಫೈಲ್ ಸೃಷ್ಟಿಸಿ ಕ್ಯಾಲಿಫೋರ್ನಿಯಾ ಮೂಲದ ಅನಿವಾಸಿ ಭಾರತೀಯರೊಬ್ಬರಿಗೆ ತೆಲಂಗಾಣ ಕುಟಂಬವೊಂದು 65 ಲಕ್ಷ ರೂ. ವಂಚಿಸಿರುವ ಆರೋಪ ಕೇಳಿಬಂದಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಬಂಧಿತರನ್ನು ಮಾಳವಿಕ ದೇವತಿ (44) ಆಕೆಯ ಮಗ ವೆಂಕಟೇಶ್ವರ ಲಲಿತ್ ಗೋಪಾಲ್ ದೇವತಿ (22) ಎಂದು ಗುರುತಿಸಲಾಗಿದ್ದು, ಮಾಳವಿಕ ಪತಿ ಶ್ರೀನಿವಾಸ್ ದೇವತಿ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಹರಿದ, ಮಾಸಿದ ಧ್ವಜ ಹಾರಿಸಿದ ಗ್ರಾಪಂ: ಬಚಾವ್ ಆಗಲು ಹೋಗಿ ಮತ್ತೊಂದು ಎಡವಟ್ಟು
ಕ್ಯಾಲಿಫೋರ್ನಿಯಾದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ವರುಣ್ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ನಾನು ಮೋಸದ ಜಾಲಕ್ಕೆ ಬೀಳುತ್ತಿದ್ದೇನೆ ಎಂಬುದನ್ನು ಅರಿಯದೇ ವರುಣ್ ಬರೋಬ್ಬರಿ 65 ಲಕ್ಷ ರೂ. ಅನ್ನು ಮಾಳವಿಕ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು.
ಕೀರ್ತಿ ಮಾಧವನೇನಿ ಹೆಸರಿನಲ್ಲಿ ಮಾಳವಿಕ ಮ್ಯಾಟ್ರಿಮೋನಿಯದಲ್ಲಿ ನಕಲಿ ಪ್ರೊಫೈಲ್ ತೆರೆದು ಅನೇಕ ವ್ಯಕ್ತಿಗಳನ್ನು ಸಂಪರ್ಕಿಸಿದ್ದರು. ಅಲ್ಲದೆ, ನಾನೋರ್ವ ವೈದ್ಯೆ ಆಗಿದ್ದು, ಹೈದರಾಬಾದ್ನ ಜಿಬಿಲಿ ಹಿಲ್ಸ್ನಲ್ಲಿ ಮನೆಯಿದೆ. ಅನೇಕ ಆಸ್ತಿಗಳನ್ನು ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದರು.
ಭರತ್ ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ಪ್ರೊಫೈಲ್ ತೆರೆಯಲು ಮಾಳವಿಕ ಮಗ ಗೋಪಾಲ್ ಸಹಾಯ ಮಾಡಿದ್ದ. ಸಂಪರ್ಕಕ್ಕೆ ಬಂದ ಹಾಗೂ ವಧು ಹುಡುಕುತ್ತಿದ್ದ ವರುಣ್ರೊಂದಿಗೆ ಮಾಳವಿಕ ಚಾಟ್ ಮಾಡುತ್ತಿದ್ದಳು. ಕತೆ ಕಟ್ಟಿದ್ದ ಮಾಳವಿಕ, ಕೀರ್ತಿ ಹೆಸರಿನಲ್ಲಿ ನನ್ನ ತಂದೆ ಸಾವಿಗೀಡಾದ ಮೇಲೆ ನನಗೂ ಮತ್ತು ನನ್ನ ತಾಯಿ (ಮಹಾಲಕ್ಷ್ಮಿ ಮಾಧವನೇನಿ ಎಂಬ ಹೊಸ ಪಾತ್ರ ಸೃಷ್ಟಿ) ನಡುವೆ ಆಸ್ತಿ ವಿಚಾರವಾಗಿ ಗಲಾಟೆ ನಡೆಯುತ್ತಿದೆ ಎಂದು ನಂಬಿಸಿದ್ದಳು.
ಆಸ್ತಿಯನ್ನು ವರ್ಗಾಯಿಸುವಂತೆ ತಾಯಿ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ಆಸ್ತಿ ನನ್ನಲ್ಲೇ ಉಳಿಯುವುದಕ್ಕಾಗಿ ಮದುವೆ ಆಗಬೇಕೆಂದುಕೊಂಡಿದ್ದೇನೆ ಎಂದಿದ್ದಳು. ಹೀಗೆ ಇಬ್ಬರ ನಡುವೆ ಚಾಟಿಂಗ್ ನಡೆದಿತ್ತು. ಕೆಲವು ವಾರಗಳ ಬಳಿಕ ಆಸ್ತಿ ವಿಚಾರವಾಗಿ ಕಾನೂನು ಹೋರಾಟ ನಡೆಸಲು ಹಣದ ಸಹಾಯ ಮಾಡುವಂತೆ ವರುಣ್ ಬಳಿ ಮಾಳವಿಕ ಕೇಳಿದ್ದಳು. ಇತ್ತ ಕಾನೂನು ಹೋರಾಟ ಮುಗಿದು ಆಸ್ತಿ ಕೀರ್ತಿ ವಶವಾದರೆ ನನಗೂ ಸಮಪಾಲು ಬರುತ್ತದೆ ಎಂದು ದುರಾಸೆಪಟ್ಟ ವರುಣ್ ಹಿಂದೆ-ಮುಂದೆ ನೋಡದೆ ಹಣ ವರ್ಗಾಯಿಸಿಬಿಟ್ಟ. ಹಣ ಬಂದ ಕೂಡಲೇ ಮಾಳವಿಕ ಚಾಟ್ ಮಾಡುವುದನ್ನು ನಿಲ್ಲಿಸಿಬಿಟ್ಟಳು. ಬಳಿಕ ಮೋಸ ಹೋಗಿರುವುದು ಅರ್ಥವಾಗಿ ವರುಣ್ ಜುಬಿಲಿ ಹಿಲ್ಸ್ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಸ್ನೇಹಿತನ ಮೂಲಕವೇ ಔಪಚಾರಿಕವಾಗಿ ದೂರು ಸಹ ದಾಖಲಿಸಿದ್ದಾರೆ. ಅಲ್ಲದೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಪೊಲೀಸರಿಗೆ ಹೇಳಿಕೆ ಸಹ ನೀಡಿದ್ದಾರೆ.
ಮಾಳವಿಕ ವಿರುದ್ಧ ಪ್ರಕರಣ ದಾಖಲಿಸಿದ್ದು ಪೊಲೀಸರಿಗೆ ಇದೇ ಮೊದಲೇನಲ್ಲ. ನಲ್ಲಕುಂಟ ಮತ್ತು ಮರೇಡ್ಪಲ್ಲಿಯಲ್ಲೂ ಮಾಳವಿಕ ವಿರುದ್ಧ ವಂಚನೆ ಪ್ರಕರಣಗಳು ದಾಖಲಾಗಿವೆ. 2014ರಲ್ಲಿ ಗೀತಾಂಜಲಿ ಹೆಸರಿನಲ್ಲಿ ಎನ್ಆರ್ಐಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದ ಪ್ರಕರಣಗಳು ಸೈಬರ್ ಕ್ರೈಂನಲ್ಲೂ ದಾಖಲಾಗಿದೆ. ಅದ್ಧೂರಿ ಜೀವನ ನಡೆಸಲು ಹಾಗೂ ಆರ್ಥಿಕ ಸಂಕಷ್ಟದಿಂದ ಅಪರಾಧ ಮಾಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೋರ್ವನಿಗಾಗಿ ಹುಡುಕಾಟ ನಡೆಯುತ್ತಿದೆ. (ಏಜೆನ್ಸೀಸ್)
ಇದನ್ನೂ ಓದಿ: ಶಾಲಾ ಬಾಲಕಿ ಅಪಹರಿಸಿ, ಅತ್ಯಾಚಾರಗೈದು ಕೊಲೆ ಮಾಡಿದ್ದ ಆರೋಪಿಗೆ ಸಿಕ್ತು ಜಾಮೀನು…!
ಜೂನ್ 30ರವರೆಗೆ ಲಾಕ್ಡೌನ್ ವಿಸ್ತರಣೆ; ಜೂನ್ 8ರಿಂದ ದೇವಸ್ಥಾನ, ಹೋಟೆಲ್, ಮಾಲ್ ಓಪನ್