ಶಹಾಬಾದ್: ತೊನಸನಳ್ಳಿ (ಎಸ್) ಗ್ರಾಮ ಪಂಚಾಯಿತಿ ಕಚೇರಿ ಮೇಲೆ ಹರಿದ ಹಾಗೂ ಸಂಪೂರ್ಣ ಮಾಸಿ ಹೋದ ರಾಷ್ಟ್ರ ಧ್ವಜ ಹಾರಿಸುವ ಮೂಲಕ ರಾಷ್ಟ್ರದ್ವಜ ಸಂಹಿತೆ ಉಲ್ಲಂಘಿಸಿದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ಪ್ರತಿ ಗ್ರಾಪಂ ಮೇಲೆ ರಾಷ್ಟ್ರ ಧ್ವಜ ಹಾರಿಸಬೇಕು ಎಂಬ ನಿಯಮವಿದೆ. ಅದರಂತೆ ತೋನಸನಳ್ಳಿ ಗ್ರಾಪಂ ಕಚೇರಿ ಮೇಲೂ ನಿತ್ಯ ಧ್ವಜ ಹಾರಿಸಲಾಗುತಿತ್ತು. ಆದರೆ ಅಧಿಕಾರಿಗಳು ಧ್ವಜದ ಸ್ಥಿತಿಗತಿ ಪರಿಶೀಲಿಸುವುದನ್ನು ಮರೆತಿದ್ದಾರೆ. ಅಂತೆಯೇ ಕೆಲ ದಿನಗಳಿಂದ ಹರಿದ ಹಾಗೂ ಬಣ್ಣ ಮಾಸಿದ ಧ್ವಜವೇ ಹಾರಾಡುತ್ತಿದೆ.
ಶುಕ್ರವಾರ ಬೆಳಗ್ಗೆ ಊರಲ್ಲಿ ಸರ್ಕಾರದಿಂದ ಶಾಸಕ ಬಸವರಾಜ ಮತ್ತಿಮೂಡ ಬಡವರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಮಾಧ್ಯಮದವರ ಕಣ್ಣಿಗೆ ಹರಿದ ಹಾಗೂ ಬಣ್ಣ ಮಾಸಿದ ಧ್ವಜ ಹಾರುತ್ತಿರುವುದು ಕಂಡಿದೆ. ಕೂಡಲೇ ಶಾಸಕ ಮತ್ತಿಮೂಡ, ತಹಸೀಲ್ದಾರ್ ಸುರೇಶ ವರ್ಮಾ , ತಾಪಂ ಇಒ ಶೃಂಗೇರಿ, ಪಿಎಸ್ಐ ಮಹಾಂತೇಶ ಪಾಟೀಲ್ ಗಮನಕ್ಕೆ ತರಲಾಗಿದೆ.
ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿರುವುದಕ್ಕೆ ಸಂಬಂಧಿಸಿದಂತೆ ಪಿಡಿಒ ಶ್ರವಣಕುಮಾರ ಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಾಪಂ ಇಒ ಲಕ್ಷ್ಮಣ ಶೃಂಗೇರಿ ದೂರು ಸಲ್ಲಿಸಿದ್ದಾರೆ.
ಬಚಾವ್ ಆಗಲು ಹೋಗಿ ಮತ್ತೊಂದು ಯಡವಟ್ಟು
ಹರಿದ ಮತ್ತು ಬಣ್ಣ ಮಾಸಿದ ಧ್ವಜ ಹಾರಿಸಿ ನಿರ್ಲಕ್ಷೃ ವಹಿಸಿರುವ ತೊನಸನಳ್ಳಿ(ಎಸ್) ಗ್ರಾಪಂ ಶುಕ್ರವಾರ ಮಧ್ಯಾಹ್ನದ ವೇಳೆ ಧ್ವಜವನ್ನು ಕೆಳಗಿಳಿಸಿ ಹೊಸ ಧ್ವಜ ಹಾರಿಸುವ ಮೂಲಕ ಮತ್ತೊಂದು ಯಡವಟ್ಟು ಮಾಡಿದೆ. ಹರಿದ ಧ್ವಜ ಹಾರಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರಗೊಳ್ಳುತ್ತಿದ್ದಂತೆ ಎಚ್ಚೆತ್ತ ಗ್ರಾಪಂ ಸಿಬ್ಬಂದಿ, ಶಾಸಕ ಮತ್ತಿಮೂಡ ಆಹಾರ ಕಿಟ್ ವಿತರಿಸುವವರೆಗೂ ಸುಮ್ಮನ್ನಿದ್ದರು. ಇದು ಮುಗಿಯುತ್ತಿದ್ದಂತೆ ಹರಿದ ಧ್ವಜವನ್ನು ಕೆಳಗಿಳಿಸಿ ಹೊಸ ಧ್ವಜ ಹಾರಿಸಿದ್ದಾರೆ. ಬೆಳಗ್ಗೆ ಹಾರಿಸಿದ ಧ್ವಜವನ್ನು ಸಂಜೆಯೇ ಕೆಳಗಿಳಸಬೇಕು ಎಂಬ ಸಾಮಾನ್ಯ ಜ್ಞಾನವೂ ಗ್ರಾಪಂ ಸಿಬ್ಬಂದಿಗೆ ಇಲ್ಲದಂತಾಗಿದೆ. ಈ ಮೂಲಕ ರಾಷ್ಟ್ರ ಧ್ವಜಕ್ಕೆ ಮತ್ತೊಮ್ಮೆ ಅಪಮಾನ ಮಾಡಿದಂತಾಗಿದೆ.