ಬೆಂಗಳೂರು: ಕಳೆದ ಮೇ ತಿಂಗಳಿನಲ್ಲಿ ಆನ್ಲೈನ್ ಮೂಲಕ ಗಣಿತಪಾಠ ಮಾಡುವ ಮೂಲಕ ಮೆಸ್ಟ್ರು ಎಂದೇ ಗುರುತಿಸಿಕೊಂಡಿದ್ದ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರು ಮತ್ತೆ ಗಣಿತ ಪಾಠ ಮಾಡಲು ಬರುತ್ತಿದ್ದಾರೆ.
ಕರೊನಾ ಬಿಕ್ಕಟ್ಟಿನ ಈ ದಿನಗಳಲ್ಲಿ ಶಾಲೆಗಳು ತೆರೆಯುವುದು ಅನುಮಾನ ಆಗಿರುವ ಹಿನ್ನೆಲೆಯಲ್ಲಿ, ಮಕ್ಕಳಿಗೆ ಗಣಿತ ಮತ್ತು ವಿಜ್ಞಾನ ವಿಷಯವನ್ನು ಕಲಿಸಬೇಕು ಎನ್ನುವ ಉದ್ದೇಶದಿಂದ ಪುನಃ ತರಗತಿ ಆರಂಭಿಸಿರುವುದಾಗಿ ದತ್ತ ಹೇಳಿದ್ದಾರೆ.
ಆನ್ಲೈನ್ ಮೂಲಕ ‘ದತ್ತ ಟುಟೋರಿಯಲ್ಸ್’ ಪುನಃ ಆರಂಭಿಸಲಿದ್ದಾರೆ. ಇದು ಎಸ್ಎಸ್ಎಲ್ಸಿ ಮಕ್ಕಳಿಗಾಗಿ ಗಣಿತ ಹಾಗೂ ವಿಜ್ಞಾನ ಪಾಠವಾಗಿದ್ದು, ದತ್ತ ಅವರ ಫೇಸಬುಕ್ ಪುಟದಲ್ಲಿ ಪಾಠದ ಕುರಿತು ನೋಡಬಹುದಾಗಿದೆ. ಗಣಿತ ಮತ್ತು ವಿಜ್ಞಾನದ ವಿಷಯಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಒಂದು ವರ್ಷದ ಪಠ್ಯದ ತಯಾರು ಮಾಡುವ ಮೂಲಕ ಆನ್ಲೈನ್ಲ್ಲಿ ಬೋಧನೆ ಮಾಡಲು ಸಿದ್ಧತೆ ನಡೆಸಿದ್ದಾರೆ.
ಇದನ್ನೂ ಓದಿ: ಕರೊನಾ ಸೋಂಕಿತರಿಗೂ ಸಿಇಟಿ ಬರೆಯಲು ಅವಕಾಶ
ಕಳೆದ ಮೇ ತಿಂಗಳಿನಲ್ಲಿ 28 ದಿನಗಳವರೆಗೆ ಆನ್ಲೈನ್ ತರಬೇತಿ ನೀಡಿದ್ದರೆ, ಅದು ಈಗ ಕರೊನಾದಿಂದ ಒಂದು ವರ್ಷ ಮಾಡುವ ತಯಾರಿ ನಡೆಸಿದ್ದಾರೆ. ಕಳೆದ ಬಾರಿ ಐದು ಲಕ್ಷ ಮಂದಿ ವೀಕ್ಷಣೆ ಮಾಡಿದ್ದರು. ಈ ಪಾಠ ಕೇಳುವ ಮೂಲಕ ತಮಗೆ ಉತ್ತಮ ಅಂಕ ಗಳಿಸಲೂ ಸಾಧ್ಯವಾಗಿದೆ ಎಂದು ಅನೇಕ ವಿದ್ಯಾರ್ಥಿಗಳು ಅನುಭವ ಹಂಚಿಕೊಂಡಿರುವ ಹಿನ್ನೆಲೆಯಲ್ಲಿ, ಇದೀಗ ಪುನಃ ಶುರು ಮಾಡಲು ತಯಾರಿ ನಡೆಸಿದ್ದಾರೆ ದತ್ತ.
ಆನ್ಲೈನ್ ಪಾಠ ಮಾಡುವಾಗ ಕೆಲವೊಂದು ತಂತ್ರಜ್ಞಾನದ ಬಳಕೆ ಅಗತ್ಯವಿದೆ. ಆದ್ದರಿಂದ ಪ್ರತಿ ವಿದ್ಯಾರ್ಥಿಗೆ ಒಂದು ದಿನಕ್ಕೆ 80 ರೂಪಾಯಿಯಂತೆ ಒಂದು ವಿಷಯಕ್ಕೆ 1,100 ರೂಪಾಯಿ ಶುಲ್ಕ ವಿಧಿಸುತ್ತಿರುವುದಾಗಿ ತಿಳಿದುಬಂದಿದೆ.