More

    ನಂಜನಗೂಡಿನಲ್ಲಿ ಸಾಮೂಹಿಕ ಯೋಗ

    ನಂಜನಗೂಡು: ನಾಡಹಬ್ಬ ದಸರಾ ಮಹೋತ್ಸವದ ಯೋಗ ದಸರಾ ಉಪಸಮಿತಿ ವತಿಯಿಂದ ಸೋಮವಾರ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಮುಂಭಾಗದಲ್ಲಿ ಆಯೋಜಿಸಿದ್ದ ಸಾಮೂಹಿಕ ಯೋಗಾಭ್ಯಾಸ ಹಾಗೂ ಶಿವ ನಮಸ್ಕಾರದಲ್ಲಿ ನೂರಾರು ಯೋಗಪಟುಗಳು ಭಾಗವಹಿಸಿದ್ದರು.
    ಮೈಸೂರು, ನಂಜನಗೂಡಿನ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಕೆಂಪಿಸಿದ್ದನಹುಂಡಿ ಆಯುಷ್ ಕ್ಷೇಮ ಕೇಂದ್ರದ ಯೋಗಪಟುಗಳು ಶಿವ ನಮಸ್ಕಾರದಲ್ಲಿ ಪಾಲ್ಗೊಂಡಿದ್ದರು.

    ಶಾಸಕ ದರ್ಶನ್ ಧ್ರುವನಾರಾಯಣ, ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಯೋಗಪಟುಗಳೊಂದಿಗೆ ಸಾಮೂಹಿಕ ಶಿವ ನಮಸ್ಕಾರ ಮಾಡುವ ಮೂಲಕ ಗಮನ ಸೆಳೆದರು.

    ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಶಿಕ್ಷಕಿ ವರಲಕ್ಷ್ಮೀ ಶಿವ ನಮಸ್ಕಾರವನ್ನು ನಡೆಸಿಕೊಟ್ಟರೆ, ಪ್ರಧಾನ ಯೋಗ ಶಿಕ್ಷಕ ಪ್ರಕಾಶ್ ಜಿ.ಉಡಿಗಾಲ ಅವರು ಶಿವ ಷಡಕ್ಷರಿ ಮಂತ್ರದ ಪ್ರಭಾವಳಿ ಮಹತ್ವವನ್ನು ನೆರೆದಿದ್ದವರಿಗೆ ಮನದಟ್ಟು ಮಾಡಿಕೊಟ್ಟರು. ನಾಲ್ಕು ಸುತ್ತು ಸಾಮೂಹಿಕ ಶಿವ ನಮಸ್ಕಾರ ಮಾಡುವುದನ್ನು ಸ್ಥಳೀಯರು ಹಾಗೂ ದೇವಾಲಯಕ್ಕೆ ಆಗಮಿಸಿದ ಭಕ್ತರು ವೀಕ್ಷಿಸಿದರು.
    ತಾಲೂಕಿನ ಕೆಂಪಿಸಿದ್ದನಹುಂಡಿ ಆಯುಷ್ ಕ್ಷೇಮ ಕೇಂದ್ರದ ಮಹಿಳೆಯರು ಸಾಮೂಹಿಕ ಯೋಗ ನೃತ್ಯ ಪ್ರದರ್ಶನ ಮಾಡಿ ಎಲ್ಲರ ಮೆಚ್ಚುಗೆ ಪಡೆದರು. ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಮಹಿಳೆಯರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

    ಭಾರತೀಯ ಯೋಗಕ್ಕೆ ಜಾಗತಿಕ ಮನ್ನಣೆ

    ಭಾರತೀಯ ಯೋಗ, ಧ್ಯಾನ, ಆಧ್ಯಾತ್ಮಕ್ಕೆ ಜಾಗತಿಕ ಮನ್ನಣೆಯಿದ್ದು, ವಿದೇಶಗಳಿಂದ ಭಾರತಕ್ಕೆ ಬಂದು ಯೋಗ ಕಲಿತು ಹೋಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

    ಸಾಮೂಹಿಕ ಶಿವ ನಮಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಚಿಕ್ಕವನಾಗಿದ್ದಾಗ ಮೈಸೂರಿನ ಗೋಕುಲಂನಲ್ಲಿ ವಾಸವಾಗಿದ್ದೆ. ಆ ಸಂದರ್ಭದಲ್ಲಿ ಬೇರೆ ಬೇರೆ ದೇಶಗಳಿಂದ ಬರುತ್ತಿದ್ದ ವಿದೇಶಿಗರು ಮೈಸೂರಿನಲ್ಲಿ ಯೋಗ ಕಲಿತು ತಮ್ಮ ದೇಶದಲ್ಲಿ ಪಸರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಇದು ವ್ಯಾಪಕವಾಗಿದ್ದು, ಜಾಗತಿಕವಾಗಿ ನಮ್ಮ ಭಾರತೀಯ ಯೋಗ ಪದ್ಧತಿಗೆ ವಿಶ್ವ ಮನ್ನಣೆ ಸಿಕ್ಕಿದೆ ಎಂದರು.

    ಆಯುಷ್ ಇಲಾಖೆ ಆಯುಕ್ತೆ ಡಾ.ಲೀಲಾವತಿ ಮಾತನಾಡಿ, ಆಯುರ್ವೇದ ಹಾಗೂ ಯೋಗ ಪದ್ಧತಿಗೂ ಅವಿನಾಭಾವ ಸಂಬಂಧವಿದೆ. ನಗರ ಪ್ರದೇಶಗಳಿಗೆ ಮಾತ್ರ ಯೋಗ ಸೀಮಿತ ಆಗಬಾರದು. ಗ್ರಾಮೀಣ ಪ್ರದೇಶಗಳಿಗೂ ಅದರ ಮಹತ್ವದ ಅರಿವಾಗಬೇಕೆಂಬ ದೃಷ್ಟಿಯಿಂದ ಗ್ರಾಮೀಣ ಪ್ರದೇಶಗಳಲ್ಲಿರುವ ಆಯುಷ್ ಕ್ಷೇಮ ಕೇಂದ್ರಗಳಲ್ಲಿ ನಿತ್ಯ ಯೋಗ ತರಗತಿಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ನುರಿತ ಯೋಗ ತರಬೇತುದಾರರನ್ನು ಇಲಾಖೆಯು ನೇಮಕ ಮಾಡಿಕೊಳ್ಳುತ್ತಿದೆ. ಆ ಮೂಲಕ ಹಳ್ಳಿಗಾಡಿನ ಜನರಿಗೂ ಯೋಗ ತಲುಪಿಸುವಲ್ಲಿ ಇಲಾಖೆ ಯಶಸ್ವಿಯಾಗಿದೆ. ನಾಡಹಬ್ಬ ದಸರಾ ಸಂದರ್ಭದಲ್ಲಿ ಜನರಿಗೆ ಯೋಗದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸಾಮೂಹಿಕ ಯೋಗಾಭ್ಯಾಸ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

    ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ಯೋಗ ದಸರಾ ಉಪಸಮಿತಿ ಅಧ್ಯಕ್ಷ ದೇವರಾಜು, ವಿಶೇಷಾಧಿಕಾರಿ ರಮ್ಯಾ, ಆಯುಷ್ ಜಿಲ್ಲಾ ಅಧಿಕಾರಿ ಡಾ.ಪುಷ್ಪಾ, ತಾಲೂಕು ಅಧಿಕಾರಿ ಡಾ.ಅಶೋಕ್‌ಕುಮಾರ್, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಆರ್.ವಿ.ರೇವಣ್ಣ, ಕಾರ್ಯದರ್ಶಿ ಎನ್.ಆರ್.ಗಣೇಶ್‌ಮೂರ್ತಿ, ಉಪಸಮಿತಿ ಸದಸ್ಯರಾದ ವಿಷ್ಣುಪ್ರಿಯ, ರಫೀಕ್, ಚನ್ನಗಿರಿ, ನಗರಸಭೆ ಪೌರಾಯುಕ್ತ ನಂಜುಂಡಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts