ನವದೆಹಲಿ: ಕರೊನಾ ಪಿಡುಗಿನ ಹೋರಾಟದಲ್ಲಿ ಸೋಂಕಿತರನ್ನು ಉಸಿರಾಟದ ತೊಂದರೆಯಿಂದ ಪಾರು ಮಾಡಲು ವೆಂಟಿಲೇಟರ್ಗಳು ತುಂಬಾ ಅಗತ್ಯ. ದೇಶದಲ್ಲಿ ಇಂಥ ವೆಂಟಿಲೇಟರ್ಗಳ ಕೊರತೆ ಹೆಚ್ಚಾಗಿದ್ದು, ವಿದೇಶದಿಂದ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಆದರೆ, ರಾಷ್ಟ್ರದ ಈ ಸಂಕಷ್ಟವನ್ನು ಅರ್ಥ ಮಾಡಿಕೊಂಡಿರುವ ದೇಶದ ಕಾರು ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ ಹಾಗೂ ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಗಳು ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿ, ವೆಂಟಿಲೇಟರ್ಗಳ ಉತ್ಪಾದನೆಗೆ ಮುಂದಾಗಿವೆ.
ಕಳೆದ 20 ದಿನಗಳ ಅವಧಿಯಲ್ಲಿ ಮಾರುತಿ ಸುಜುಕಿ ಕಂಪನಿ 1,500 ವೆಂಟಿಲೇಟರ್ಗಳನ್ನು ತಯಾರಿಸಿದೆ. ಅಲ್ಲದೆ, ಕೇಂದ್ರ ಸರ್ಕಾರದಿಂದ ವೆಂಟಿಲೇಟರ್ಗಳಿಗಾಗಿ ಆರ್ಡರ್ಗಳನ್ನು ನಿರೀಕ್ಷಿಸುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಾರುತಿ ಸುಜುಕಿ ಕಂಪನಿಯ ಚೇರ್ಮನ್ ಆರ್.ಸಿ. ಭಾರ್ಗವ, ವೆಂಟಿಲೇಟರ್ಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಅವುಗಳನ್ನು ತಯಾರಿಸುವಂತೆ ಕೇಂದ್ರ ಸರ್ಕಾರ ನಮ್ಮನ್ನು ಕೇಳಿತು. ಅದರಂತೆ ನಾವು ವೆಂಟಿಲೇಟರ್ಗಳನ್ನು ತಯಾರಿಸಿದೆವು. ಸರ್ಕಾರಿ ಸಂಸ್ಥೆ ಎಚ್ಎಲ್ಎಲ್ ಅವುಗಳನ್ನು ಪರಿಶೀಲಿಸಿದೆ. ದುರದೃಷ್ಟವಶಾತ್ ಸಂಸ್ಥೆ ಇನ್ನೂ ನಮಗೆ ಯಾವುದೇ ವರದಿ ಕಳುಹಿಸಿಲ್ಲ. ಹಾಗಾಗಿ, ಸಿದ್ಧವಾಗಿರುವ ವೆಂಟಿಲೇಟರ್ಗಳ ದಾಸ್ತಾನಿನೊಂದಿಗೆ ಆರ್ಡರ್ಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.
ರಾಷ್ಟ್ರಾದ್ಯಂತ ಲಾಕ್ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಕಾರು ಮಾರಾಟವೂ ಸ್ಥಗಿತವಾಗಿದೆ. ಹಾಗಾಗಿ ಉತ್ಪಾದನೆಯೂ ಸ್ಥಗಿತವಾಗಿದೆ. ಈ ಅವಕಾಶವನ್ನು ಬಳಸಿಕೊಂಡು ವೆಂಟಿಲೇಟರ್ಗಳನ್ನು ತಯಾರಿಸುವಂತೆ ಕಾರು ತಯಾರಿಕಾ ಕಂಪನಿಗಳಿಗೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಗಳು ವೆಂಟಿಲೇಟರ್ಗಳ ತಯಾರಿಕೆಯಲ್ಲಿ ತೊಡಗಿದ್ದವು.
ಮಾರುತಿ ಸುಜುಕಿ ಕಂಪನಿ ತಯಾರಿಸಿರುವ ವೆಂಟಿಲೇಟರ್ಗಳನ್ನು ಗುರುಗ್ರಾಮದ ಮೇದಾಂತಾ ಹಾಸ್ಪಿಟಲ್ನವರು ಬಳಸಿದ್ದಾರೆ. ಕಳೆದೆರಡು ವಾರಗಳಿಂದ ಇವನ್ನು ಅಲ್ಲಿ ಬಳಸಲಾಗುತ್ತಿದ್ದು, ಅವುಗಳ ಕಾರ್ಯತತ್ಪರತೆ ಬಗ್ಗೆ ಆಸ್ಪತ್ರೆಯ ವೈದ್ಯರು ಸಂತೃಪ್ತರಾಗಿದ್ದಾರೆ. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ವೆಂಟಿಲೇಟರ್ಗಳನ್ನು ಪೂರೈಸುವಂತೆ ಮನವಿ ಮಾಡಿಕೊಳ್ಳುತ್ತಿರುವುದಾಗಿ ಭಾರ್ಗವ ಹೇಳಿದ್ದಾರೆ.
ವೆಂಟಿಲೇಟರ್ಗಳ ತಯಾರಿಕೆಯ ಕಂಪನಿಯ ಸಿಬ್ಬಂದಿ ಅವರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ವಿವರಿಸಿರುವ ಅವರು, ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಮನೋಭಾವದಲ್ಲಿ ಅವರು ವೆಂಟಿಲೇಟರ್ಗಳ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಈ ಹಿನ್ನೆಲೆಯಲ್ಲಿ ಅವರೆಲ್ಲರೂ ತಡರಾತ್ರಿಯವರೆಗೂ ಶ್ರಮಪಟ್ಟು ವೆಂಟಿಲೇಟರ್ಗಳನ್ನು ತಯಾರಿಸಿದರು. ಕೇವಲ 20 ದಿನಗಳಲ್ಲಿ ಶೂನ್ಯದಿಂದ 300 ವೆಂಟಿಲೇಟರ್ಗಳನ್ನು ಉತ್ಪಾದಿಸಲು ಇದರಿಂದ ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.
ಲಾಕ್ಡೌನ್ ನಡುವೆಯೂ ದೇಶದೆಲ್ಲೆಡೆ ಸಂಚರಿಸುತ್ತಿರುವ ಪಂಜಾಬ್ ಸರ್ಕಾರಿ ಬಸ್ಗಳು; ಶಾಪವಲ್ಲ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಜನ