ಹಾವೇರಿ: ವಿವಾಹಿತ ಮಹಿಳೆಯೊಬ್ಬರ ಮೇಲೆ ಆಸಿಡ್ ದಾಳಿ ನಡೆಸಿರುವ ಮೃಗೀಯ ಘಟನೆ ಶಿಗ್ಗಾಂವಿ ತಾಲೂಕಿನ ಹುಣಸಿಕಟ್ಟಿ ಬಳಿಯ ಗುಡ್ಡದಲ್ಲಿ ನಡೆದಿರುವುದಾಗಿ ಬುಧವಾರ ವರದಿಯಾಗಿದೆ.
ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತೆಯು ಗಂಭೀರವಾಗಿ ಗಾಯಗೊಂಡಿದ್ದು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಿಗ್ಗಾಂವಿ ಪಟ್ಟಣದ ಮಂಜುನಾಥ ಕಳಸದ ವಿರುದ್ಧ ಆಸಿಡ್ ದಾಳಿ ನಡೆಸಿದ ಆರೋಪ ಕೇಳಿಬಂದಿದೆ.
ಮಹಿಳೆಯೊಂದಿಗೆ ಆರೋಪಿ ಅನೈತಿಕ ಸಂಬಂಧ ಹೊಂದಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಇದೇ ವಿಚಾರದಲ್ಲಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಒಮ್ಮೆ ಹುಣಸಿಕಟ್ಟಿ ಗುಡ್ಡಕ್ಕೆ ಕರೆದುಕೊಂಡು ಹೋಗಿದ್ದ ಮಂಜುನಾಥ, ಮಹಿಳೆಯ ಕೈ ಕಟ್ಟಿ, ಗುಪ್ತಾಂಗ ಮತ್ತು ತೊಡೆ ಹಾಗೂ ಹೊಟ್ಟೆಯ ಮೇಲೆ ಆಸಿಡ್ ಸುರಿದು ಸೈಕೋ ರೀತಿ ವರ್ತಿಸಿದ್ದಾನೆ ಎಂದು ಹೇಳಲಾಗಿದೆ.
ಆಸಿಡ್ ಸುರಿದು ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಆರೋಪಿ ಮಂಜುನಾಥ್ನನ್ನು ಬಂಕಾಪುರ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)