ಮಾನ್ವಿ: ಪ್ರತಿಯೊಂದು ಮಠದಲ್ಲಿ ಗುರು ಶಿಷ್ಯರ ಬಾಂಧವ್ಯ ಬೆಳೆಯಬೇಕು. ಹಿರಿಯ ಶ್ರೀಗಳು ತಮ್ಮಲ್ಲಿನ ಸಂಪೂರ್ಣವಾದ ಶಕ್ತಿಯನ್ನು ಶಿಷ್ಯರಿಗೆ ಧಾರೆ ಎರೆಯಬೇಕು. ಕಿರಿಯ ಶ್ರೀಗಳ ಮೂಲಕ ಸಮಾಜದ ಉನ್ನತಿ ಕಾಣಬೇಕು ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಮಲ್ಲಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಶಿವರಾತ್ರಿ, ಲಿಂ.ಗುರು ವಿರೂಪಾಕ್ಷ ಸ್ವಾಮೀಜಿ ಪುಣ್ಯಸ್ಮರಣೆ ಮತ್ತು ಡಾ.ಶಿವಮೂರ್ತಿಶಿವಾಚಾರ್ಯ ಸ್ವಾಮೀಜಿ 75ನೇ ಹುಟ್ಟು ಹಬ್ಬದ ಅಂಗವಾಗಿ ಪಟ್ಟಣದ ಕಲ್ಮಠ ಧ್ಯಾನಮಂದಿರ ಆವರಣದಲ್ಲಿ ಗುರುವಾರ ಪ್ರವಚನ ಹಾಗೂ ರಾಯಚೂರು ಜಿಲ್ಲಾ ಶರಣರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಕಲ್ಮಠ ಶ್ರೀಗಳು ಈ ಭಾಗದಲ್ಲಿ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಬಹಳಷ್ಟು ಶ್ರಮಿಸಿದ್ದಾರೆ ಎಂದರು.
ಕಲ್ಮಠ ಈ ಭಾಗದಲ್ಲಿ ಪ್ರಸಿದ್ದಿ ಪಡೆದಿರುವುದಕ್ಕೆ ಶ್ರೀಗಳ ಪರಿಶ್ರಮವೇ ಕಾರಣ. ಶ್ರೀಮಠ ಮತ್ತು ಭಕ್ತರನ್ನು ಮುನ್ನೆಡಿಸಿಕೊಂಡು ಹೋಗಲು ಶ್ರೀಗಳು ಉತ್ತಮ ಕಿರಿಯ ಸ್ವಾಮೀಜಿರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಭಾಗದಲ್ಲಿ ಶರಣರು ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ. ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸುವ ಕಾರ್ಯವನ್ನು ಕಿರಿಯ ಶ್ರೀಗಳು ಹಿರಿಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಕೈಗೊಳ್ಳಬೇಕು. ಈ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿ ಅದರ್ಶ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲಿ ಎಂದರು.