ತುಮಕೂರು: ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ಬರೀ ಕರ್ತವ್ಯ ನಿಷ್ಠೆಯಿಂದ ಮಾತ್ರವಲ್ಲ, ಅವರ ಹವ್ಯಾಸದಿಂದಲೂ ಜನರ ಗಮನ ಸೆಳೆಯುತ್ತಿದ್ದಾರೆ.
ಕೆಲ ತಿಂಗಳ ಹಿಂದೆ ಕೋತಿರಾಜ್ ಥರಾ ಸರಸರನೆ ಚಿತ್ರದುರ್ಗ ಕೋಟೆಯ ಕಲ್ಲಿನ ಗೋಡೆಯನ್ನು ಐಪಿಎಸ್ ಅಧಿಕಾರಿ ಶಶಿಕುಮಾರ್ ಹತ್ತಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಇದೀಗ ತುಮಕೂರಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಹಾಡು ಹೇಳಿ ಜನರನ್ನು ರಂಜಿಸಿದ್ದಾರೆ. ಮಂಗಳೂರು ಪೊಲೀಸ್ ಕಮೀಷನರ್ರಿಂದ ತುಮಕೂರಲ್ಲಿ ನಡೆದ ಗಾನ ಬಜಾನ ಮಾಡಿದ ದೃಶ್ಯವೂ ವೈರಲ್ ಆಗುತ್ತಿದ್ದು, ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ನಿನ್ನೆ(ಶುಕ್ರವಾರ) ಹೋಗುತಿದ್ದ ಶಶಿಕುಮಾರ್, ದಾರಿ ಮಧ್ಯೆ ತುಮಕೂರು ನಗರದ ಹನುಮಂತಪುರದಲ್ಲಿರುವ ಕೊಲ್ಲಾಪುರದಮ್ಮ ದೇವಸ್ಥಾನದ ದೀಪಾಲಂಕಾರ, ಲಕ್ಷ ದೀಪೋತ್ಸವ ಕಂಡು ಮನಸೋತು ಧಿಡೀರ್ ಭೇಟಿಕೊಟ್ಟರು. ಕಾರ್ಯಕ್ರಮದ ವೇದಿಕೆಯಲ್ಲಿ ಪುನೀತ್ ರಾಜ್ಕುಮಾರ್ ಅವರ ಗೊಂಬೆ ಹೇಳುತೈತೆ.. ಹಾಡು, ಶಿವರಾಜ್ಕುಮಾರ್ ಅಭಿನಯದ ‘ಟಗರು ಬಂತು ಟಗರು’ ಹಾಡು ಹಾಡಿ ರಂಜಿಸಿದರು.
ಪೊಲೀಸ್ ಕಮಿಷನರ್ರ ಹಾಡಿಗೆ ಮನಸೋತ ಜನರು ಚಪ್ಪಾಳೆಯ ಸುರಿಮಳೆಗೈದರು. ಯುವಕರು ಶಿಳ್ಳೆ ಹಾಕಿ ಸಂಭ್ರಮಿಸಿದರು. ಇನ್ನು ಜನರ ಜತೆ ಸರತಿಯಲ್ಲಿ ಹೋಗಿ ಪ್ರಸಾದ ಸ್ವೀಕರಿಸಿದ ಶಶಿಕುಮಾರ್, ಜನರೊಂದಿಗೇ ಕುಳಿತು ತಿನ್ನುತ್ತಾ ಸರಳತೆ ಮೆರೆದರು. ಐಪಿಎಸ್ ಅಧಿಕಾರಿ ಶಶಿಕುಮಾರ್ ಅವರು ಚಿತ್ರದುರ್ಗ ಜಿಲ್ಲೆ ಮೂಲದವರು. ಪ್ರಸ್ತುತ ಮಂಗಳೂರು ಪೊಲೀಸ್ ಕಮೀಷನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೋತಿರಾಜ್ ಥರಾ ಸರಸರನೆ ಚಿತ್ರದುರ್ಗ ಕೋಟೆ ಏರಿದ IPS ಅಧಿಕಾರಿ! ಮಂಗ್ಳೂರು ಕಮೀಷನರ್ರ ಸಾಹಸಕ್ಕೆ ಮನಸೋತ ಜನ