ಮಂಗಳೂರು: ಕರ್ನಾಟಕದ ಸಿಟಿ ಬಸ್ಗಳು ಅಂತಾರಾಜ್ಯ ಗಡಿ ಪ್ರದೇಶದಲ್ಲಿರುವ ತಲಪಾಡಿ ಟೋಲ್ ದಾಟುವ ವಿಷಯ ಸಂಬಂಧಿಸಿದ ವಿವಾದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಧ್ಯಸ್ಥಿಕೆಯಲ್ಲಿ ಗುರುವಾರ ಸೌಹಾರ್ದಯುತ ಪರಿಹಾರ ಕಂಡಿದೆ. ಇನ್ನು ಮಂಗಳೂರಿನ ಎಲ್ಲ ಸಿಟಿ ಬಸ್ಸುಗಳು ತಲಪಾಡಿ ಟೋಲ್ ದಾಟಿ ಕೇರಳದ ಲೋಕಲ್ ಬಸ್ಗಳು ತಿರುಗುವ ತಲಪಾಡಿ ಬಸ್ ನಿಲ್ದಾಣ ತನಕ ಸಂಚರಿಸಲಿವೆ.
ಸಿಟಿ ಬಸ್ಗಳು ಟೋಲ್ ದಾಟಿ 200 ಮೀಟರ್ ದೂರದಲ್ಲಿರುವ ಅಂತಾರಾಜ್ಯ ಬಸ್ಗಳು ಸಂಧಿಸುವ ನಿಲ್ದಾಣ ತಲುಪಲು ಪ್ರತೀ ಬಸ್ಗೆ ಮಾಸಿಕ 40 ಸಾವಿರ ರೂವಿನಷ್ಟು ಶುಲ್ಕ ಪಾವತಿಸಬೇಕಿತ್ತು. ಇದು ದುಬಾರಿ ಎಂದು ಬಸ್ ಮಾಲೀಕರು ವಿರೋಧ ವ್ಯಕ್ತಪಡಿಸಿ ಟೋಲ್ಗೇಟ್ಗಿಂತ ಈಚೆಯೇ ಬಸ್ ನಿಲ್ಲಿಸುತ್ತಿದ್ದರು. ಇದರಿಂದ ಬಸ್ ಪ್ರಯಾಣಿಕರು ನಡೆದುಕೊಂಡೇ ಟೋಲ್ಗೇಟ್ ದಾಟಿ ಬಸ್ ನಿಲ್ದಾಣ ತಲುಪಬೇಕಿತ್ತು.
ಗುರುವಾರ ಈ ಕುರಿತು ಸಭೆ ನಡೆಸಿದ ಜಿಲ್ಲಾಧಿಕಾರಿ ಸಮಸ್ಯೆ ಇತ್ಯರ್ಥಪಡಿಸಿದ್ದಾರೆ. ಪ್ರತೀ ಬಸ್ ಮಾಸಿಕವಾಗಿ 14 ಸಾವಿರ ರೂ. ಪಾವತಿಸಬೇಕು ಎಂಬ ನಿರ್ಧಾರಕ್ಕೆ ಬಸ್ ಮಾಲೀಕರು ಮತ್ತು ನವಯುಗ ಸಂಸ್ಥೆ ಒಪ್ಪಿಕೊಂಡಿದೆ. ತಲಪಾಡಿ ಟೋಲ್ಗೇಟ್ ದಾಟುವ ಪ್ರಯಾಣಿಕರಿಗೆ ಹೆಚ್ಚುವರಿಯಾಗಿ 2 ರೂ. ಟಿಕೆಟ್ ಪಡೆಯಲು ನಿರ್ಧರಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿಶುಮೋಹನ್, ನವಯುಗ ಸಂಸ್ಥೆಯ ಕೇಂದ್ರ ಕಚೇರಿ (ಆಂಧ್ರ ಪ್ರದೇಶ) ಪ್ರತಿನಿಧಿ ರಾಮಕೃಷ್ಣನ್, ತಲಪಾಡಿಯ ಟೋಲ್ ಮ್ಯಾನೇಜರ್ ಶಿವಪ್ರಸಾದ್ ರೈ, ದ.ಕ ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ, ಜಿಲ್ಲಾ ಪಂಚಾಯಿತಿ ಸದಸ್ಯೆ ಸುರೇಖಾ, ಗ್ರಾಪಂ ಸದಸ್ಯರಾದ ವಾಣಿ, ವೈಭವ್, ಗಡಿ ನಾಡು ರಕ್ಷಣೆ ವೇದಿಕೆ ಅಧ್ಯಕ್ಷ ಸಿದ್ದಿಕ್ ತಲಪಾಡಿ, ಮುಖಂಡರಾದ ಯಶು ಪಕಲ, ವಿನಯ ನಾಯಕ್, ಶರತ್ ಮರೋಳಿ, ಸುದೇಶ್ ಮರೋಳಿ, ರವಿರಾಜ್, ಅಶ್ವತ್ಥಾಮ ಹೆಗ್ಡೆ ಉಪಸ್ಥಿತರಿದ್ದರು.
ಒಂದು ಸಿಟಿ ಬಸ್ಗೆ ಬಸ್ ಮಾಲೀಕರು 14,000 ಶುಲ್ಕ ಪಾವತಿಸದ ಕೂಡಲೇ ನಿಗದಿತ ಬಸ್ ಒಂದು ತಿಂಗಳು ಟೋಲ್ ದಾಟಲು ಸಾಧ್ಯವಾಗುವಂತೆ ಪಾಸ್ ದೊರೆಯಲಿದೆ. ಎಲ್ಲ ಬಸ್ಗಳಿಗೆ ಫಾಸ್ಟಾೃಗ್ ಅವಶ್ಯವಿದ್ದು, ಈ ಫಾಸ್ಟಾೃಗ್ಗೆ ಮಾಸಿಕ ಪಾಸ್ ಸೌಲಭ್ಯದ ಸಂಪರ್ಕ ಒದಗಿಸಲಾಗುವುದು.
ಶಿವಪ್ರಸಾದ್ ರೈ, ಮ್ಯಾನೇಜರ್, ತಲಪಾಡಿ ಟೋಲ್ ಕೇಂದ್ರ