ಮಂಡ್ಯ: ಅ.11 ರಂದು ಮಳವಳ್ಳಿಯಲ್ಲಿ ನಡೆದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಎರಡೇ ವಾರದಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
638 ಪುಟಗಳ ದೋಷಾರೋಪಣ ಪಟ್ಟಿ ಸಲ್ಲಿಸಿರುವ ಪೊಲೀಸರು, ಟ್ಯೂಷನ್ ಮೇಲ್ವಿಚಾರಕ ಎಸಗಿದ ಭಯಾನಕ ಕೃತ್ಯವನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ.
ಅ. 11ರಂದು ಟ್ಯೂಷನ್ ಮೇಲ್ವಿಚಾರಕ ಕಾಂತರಾಜು ಎಂಬಾತನಿಂದ ಹೇಯ ಕೃತ್ಯ ನಡೆದಿದ್ದು, ಆರೋಪಿಗೆ ತಕ್ಷಣ ಶಿಕ್ಷೆ ನೀಡುವಂತೆ ಕುಟುಂಬಸ್ಥರು ಆಗ್ರಹಿಸಿದ್ದರು. ಅಲ್ಲದೆ, ಸಾರ್ವಜನಿಕರು ಹಾಗೂ ಸಂಘಟನೆಗಳಿಂದಲೂ ಹೋರಾಟ ನಡೆದಿತ್ತು. ಹೀಗಾಗಿ ಶೀಘ್ರ ತನಿಖೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರ, ಮಂಡ್ಯ ಪೊಲೀಸರಿಗೆ ಸೂಚನೆ ನೀಡಿತ್ತು.
ಪ್ರಕರಣದ ಸೂಕ್ಷ್ಮತೆ ಅರಿತು ಮಳವಳ್ಳಿ ಡಿವೈಎಸ್ಪಿ ನವೀನ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಘಟನೆ ನಡೆದ ಎರಡೇ ವಾರದಲ್ಲಿ ತನಿಖಾ ತಂಡದಿಂದ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆಯಾಗಿದ್ದು, ಈ ಬಗ್ಗೆ ಮಂಡ್ಯ ಎಸ್ಪಿ ಎನ್. ಯತೀಶ್ ಮಾಹಿತಿ ನೀಡಿದ್ದಾರೆ.
ತನಿಖೆಯನ್ನು ಪಾರದರ್ಶಕ ಹಾಗೂ ವೈಜ್ಞಾನಿಕವಾಗಿ ನಡೆಸಲಾಗಿದೆ. ಎಲ್ಲ ಸಾಕ್ಷಿಗಳನ್ನು ಸಂಗ್ರಹಿಸಿ ವಿವರವಾದ ಚಾರ್ಜ್ ಶೀಟ್ ಸಲ್ಲಿಸಿದ್ದೇವೆ. ಪ್ರಕರಣದ ವಿಚಾರಣೆಗೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡುವಂತೆಯು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಎಸ್ಪಿ ಯತೀಶ್ ಹೇಳಿದರು.
ಚಾರ್ಜ್ಶೀಟ್ನಲ್ಲಿ ಸ್ಫೋಟಕ ಸಂಗತಿ ಬಯಲು
ದೋಷಾರೋಪಣಾ ಪಟ್ಟಿಯಲ್ಲಿ ಸ್ಪೋಟಕ ವಿಚಾರ ಉಲ್ಲೇಖವಾಗಿದೆ. ಈ ಘಟನೆ ಆಕಸ್ಮಿಕವಲ್ಲ, ಸಂಪೂರ್ಣ ಪೂರ್ಣ ನಿಯೋಜಿತ ಎಂದು ತಿಳಿದುಬಂದಿದೆ. ಬಾಲಕಿಯನ್ನು ಪುಸಲಾಯಿಸಲು ಆರೋಪಿ ಕಾಂತರಾಜು ಪ್ರತಿದಿನ ಚಾಕೋಲೇಟ್ ನೀಡುತ್ತಿದ್ದ. ಶಾಲೆಗೆ ರಜೆಯಿದ್ದರಿಂದ ಟ್ಯೂಷನ್ ಇದಿಯಾ ಎಂದು ಕೇಳಲು ಬಾಲಕಿ ಕರೆ ಮಾಡಿದ್ದಳು. ನಾಳೆ 11 ಗಂಟೆಗೆ ಟ್ಯೂಷನ್ ಇದೆ ಬಾ ಅಂತಾ ಕೀಚಕ ಕಾಂತರಾಜು ಹೇಳಿದ್ದ. ಕಾಂತರಾಜು ಕರೆ ಹಿನ್ನಲೆ 11 ಗಂಟೆಗೆ ಬಾಲಕಿ ಟ್ಯೂಷನ್ನತ್ತ ತೆರಳಿದ್ದಳು.
ಟ್ಯೂಷನ್ ಕೇಂದ್ರಕ್ಕೆ ಬೀಗ ಹಾಕಿದ ಹಿನ್ನೆಲೆಯಲ್ಲಿ ಕಾಂತರಾಜು ತಾನು ವಾಸವಿದ್ದ ಮೇಲಿನ ಮಹಡಿಗೆ ಬಾ ಎಂದು ಕರೆದಿದ್ದ. ಬಳಿಕ ಬಾಲಕಿಗೆ ಚಾಕೋಲೆಟ್ ಕೊಟ್ಟು ಟ್ಯೂಷನ್ ಪಕ್ಕದ ನಿರ್ಮಾಣ ಹಂತದ ಮನೆಗೆ ಕರೆದೊಯದ್ದು, ಬಲವಂತವಾಗಿ ಸಂಭೋಗ ಮಾಡಿದ್ದಾನೆ. ಆಕೆ ಕಿರುಚದಂತೆ ಆಕೆಯ ಒಳ ಉಡುಪನ್ನು ಬಾಯಿಗೆ ತುರುಕಿದ್ದ. ಅತ್ಯಾಚಾರ ಎಸಗಿದ ಬಳಿಕ ಕಲ್ಲಿನಿಂದ ಹಲ್ಲೆ ನಡೆಸಿ, ವೈರ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ, ಬಾಲಕಿಯ ಶವವನ್ನು ನೀರಿನ ಸಂಪ್ಗೆ ಎಸೆದಿದ್ದ. ನಂತರ ಬಾಲಕಿಯ ಬಟ್ಟೆಗಳನ್ನು ಮನೆಯ ಹೊರಗೆ ಬಿಸಾಕಿ, ಏನು ಗೊತ್ತಿಲ್ಲದಂತೆ ನಾಟಕವಾಡಿದ್ದ.
ಇಷ್ಟೇಲ್ಲ ದುಷ್ಕೃತ್ಯ ಎಸಗಿದ ಕೀಚಕ ಕಾಂತರಾಜು, ತನ್ನ ಮೇಲೆ ಅನುಮಾನ ಬಾರದಂತೆ ಪೋಷಕರೊಂದಿಗೆ ಬಾಲಕಿಗಾಗಿ ಹುಡುಕಾಟ ನಡೆಸಿದ್ದ. ಬೇರೆಯವರ ಮೇಲೆ ಅನುಮಾನ ಮೂಡುವಂತೆ ಷಡ್ಯಂತ್ರ ಮಾಡಿದ್ದ. ಪೋನ್ ಕರೆ ಪರಿಶೀಲನೆ ಬಳಿಕ ಕೀಚಕನ ಕಾಂತರಾಜುವಿನ ಕೃತ್ಯ ಬಯಲಾಗಿದೆ.
ಕೀಚಕ ಕಾಂತರಾಜ್ ಇತಿಹಾಸವೇ ರೋಚಕ!
ಕೀಚಕ ಕಾಂತರಾಜ್ ಓದಿರೋದು ಪಿಯುಸಿ ಅಲ್ಲ, ಮಾಸ್ಟರ್ ಡಿಗ್ರಿ. ಮಾನವಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾನೆ. ಮಾನವನ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಬೇಕಿದ್ದವ ಮಾಡಿದ್ದು ಮಾತ್ರ ಮಾನವರೇ ತಲೆತಗ್ಗಿಸುವಂತ ಹೇಯ ಕೃತ್ಯ. ಎಂಎ ಬಳಿಕ ಪಿಎಚ್ಡಿಗು ಸೇರಿದ್ದ. ಅರ್ಧಕ್ಕೆ ಓದು ಬಿಟ್ಟು ಕೆಲಸಕ್ಕೆ ಸೇರಿದ್ದ. 6 ವರ್ಷಗಳ ಹಿಂದೆ ಹೆಂಡತಿಯೊಂದಿಗೆ ದೂರವಾಗಿದ್ದ. ದೂರವಾಗಿದ್ದರೂ ತನ್ನ ಇಬ್ಬರು ಹೆಣ್ಣುಮಕ್ಕಳ ಜೊತೆ ಸಂಪರ್ಕದಲ್ಲಿದ್ದ. ನಂತರ ಪ್ರತಿಷ್ಠಿತ ಇನ್ಪೋಸಿಸ್ ಸಂಸ್ಥೆಯಲ್ಲಿ ಅಡ್ಮಿನ್ ವಿಭಾಗದಲ್ಲಿ ಕೆಲಸ ಪ್ರಾರಂಭಿಸಿದ್ದ. ಕರೊನಾ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡಿದ್ದವನಿಗೆ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರು ಮನೆಯಲ್ಲಿಯೇ ಗಾರ್ಡನ್ ಆಗಿ ಕೆಲಸ ನೀಡಿದ್ದರು. ಆದರೆ, ಕೆಲಸ ನೀಡಿದ್ದ ಮಮಕಾರವನ್ನು ಮರೆತು ಕೇವಲ 2 ತಿಂಗಳಿಗೆ ಕೆಲಸ ಬಿಟ್ಟಿದ್ದ. ಮಳವಳ್ಳಿಗೆ ಬಂದು ಜ್ಞಾನ ಕುಟೀರ ಟ್ಯೂಷನ್ ಸೆಂಟರ್ನಲ್ಲಿ ಮೇಲ್ವಿಚಾರಕನಾಗಿ ನೇಮಕವಾಗಿದ್ದ. ಗುರು ಸ್ಥಾನದಲ್ಲಿದ್ದ ಕಾಂತರಾಜ್, ಮಾಡಿದ್ದು ಮಾತ್ರ ನೀಚ ಕೃತ್ಯ. (ದಿಗ್ವಿಜಯ ನ್ಯೂಸ್)
ಮಳವಳ್ಳಿಯಲ್ಲಿ ಅತ್ಯಾಚಾರ ಪ್ರಕರಣ: ಡಿಡಿಪಿಐಗೆ ಬಿಇಒ ಸಲ್ಲಿಸಿದ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ
ತೋಟದಲ್ಲಿ ಕೆಲ್ಸ ಮಾಡಲು ಹೋಗಿದ್ದ ಮಹಿಳೆಯನ್ನು ಜೀವಂತ ನುಂಗಿದ ಹೆಬ್ಬಾವು! ಭಯಾನಕ ಫೋಟೋಗಳು ವೈರಲ್