ಮದ್ದೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿ ಮದ್ದೂರು ತಾಲೂಕು ಜೆಡಿಎಸ್ ವತಿಯಿಂದ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಉಗ್ರ ನರಸಿಂಹಸ್ವಾಮಿ ಹಾಗೂ ಹೊಳೆ ಆಂಜನೇಯಸ್ವಾಮಿ ದೇಗುಲಗಳಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ, ಹಿಂದುಳಿದವರ, ಅಲ್ಪ ಸಂಖ್ಯಾತರ ಹಾಗೂ ಎಲ್ಲ ವರ್ಗಗಳ ಜನರ ಪರವಾಗಿ ನಿರಂತರವಾಗಿ ಕೆಲಸ ಮಾಡುವ ಮೂಲಕ ರಾಜ್ಯದ ಮನೆ ಮಾತಾಗಿದ್ದಾರೆ. ಅವರು ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಶೀಘ್ರ ಗುಣಮುಖರಾಗಿ ಸಕ್ರಿಯ ರಾಜಕಾರಣಕ್ಕೆ ಮರಳಲಿ ಎಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತರಿಗೆ ತೀರ್ಥ, ಪ್ರಸಾದ ವಿತರಣೆ ಮಾಡಲಾಯಿತು ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕ ತಿಮ್ಮೇಗೌಡ ಮಾತನಾಡಿ, ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕುಮಾರಸ್ವಾಮಿ ಅವರೇ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಬೇಕು. ಒಂದು ವೇಳೆ ಸ್ಪರ್ಧೆ ಮಾಡಿದರೆ ಅತಿ ಹೆಚ್ಚಿನ ಮತಗಳ ಅಂತರದಲ್ಲಿ ಅವರನ್ನು ಗೆಲ್ಲಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪುರಸಭಾ ಸದಸ್ಯರಾದ ಎಸ್.ಮಹೇಶ್, ಎಂ.ಐ.ಪ್ರವೀಣ್, ಪ್ರಮೀಳಾ, ವನಿತಾ, ಬಸವರಾಜು, ತೈಲೂರು ಪ್ರಸನ್ನ, ಆದಿಲ್ ಆಲಿಖಾನ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಜೆಡಿಎಸ್ ಮಹಿಳಾ ತಾಲೂಕು ಘಟಕದ ಅಧ್ಯಕ್ಷೆ ದಿವ್ಯಾ ರಾಮಚಂದ್ರಶೆಟ್ಟಿ, ಮುಖಂಡರಾದ ಅಪ್ಪು ಪಿ.ಗೌಡ, ಬಿಳಿಯಪ್ಪ, ಕೂಳಗೆರೆ ಶೇಖರ್, ಮಲ್ಲರಾಜು, ಶಿವನಂಜಪ್ಪ, ಬಸವರಾಜು, ಡಿ.ಸಿ.ಮಹೇಂದ್ರ, ವಳಗೆರಹಳ್ಳಿ ಪ್ರಜ್ವಲ್, ಸೌದೆ ನಿಂಗಯ್ಯ, ಪುಟ್ಟಸ್ವಾಮಿ, ಗೂಳೇಶ್, ರಾಧಕೃಷ್ಣ ಇದ್ದರು.