ಮಂಡ್ಯ: ನಿಗೂಢವಾಗಿದ್ದ ಮಂಡ್ಯ ಯುವತಿ ನಾಪತ್ತೆ ಪ್ರಕರಣ ಕೊನೆಗೂ ಹೊರ ಜಗತ್ತಿಗೆ ತೆರೆದುಕೊಂಡಿದೆ. ಪ್ರೀತಿಸಿ ಮದುವೆಯಾಗಿದ್ದ ಯುವಕನಿಂದಲೇ ಯುವತಿಯ ಹತ್ಯೆಯಾಗಿರುವ ವಿಚಾರ ಪೊಲೀಸ್ ತನಿಖೆ ಮೂಲಕ ಬಹಿರಂಗವಾಗಿದೆ.
ಐದು ವರ್ಷದ ಹಿಂದಿನ ನಿಗೂಢ ಕೊಲೆಯನ್ನು ಭೇದಿಸುವಲ್ಲಿ ಪಾಂಡವಪುರ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಸ್ವಾಮಿ ಬಂಧಿತ ಆರೋಪಿ. ಈತ ಪಾಂಡವಪುರ ತಾಲೂಕಿನ ತಿರುಮಲಾಪುರ ಗ್ರಾಮದ ನಿವಾಸಿ. ಮೇಘಶ್ರೀ ಎಂಬ ಯುವತಿಯನ್ನು ಕೊಲೆ ಮಾಡಿ ನಾಲೆಗೆ ಎಸೆದಿದ್ದ. ಬಳಿಕ ಪ್ರಕರಣವನ್ನು ಮುಚ್ಚಿಹಾಕಿದ್ದ.
ಇದನ್ನೂ ಓದಿ: ಬೇಡವೆಂದ್ರೂ ಬಾಯ್ಫ್ರೆಂಡ್ ಜತೆ ಸಹೋದರಿಯ ಚಾಟಿಂಗ್: ಸಿಟ್ಟಿಗೆದ್ದ ತಮ್ಮನಿಂದ ದುಷ್ಕೃತ್ಯ!
ಇತ್ತೀಚೆಗೆ ಮೇಘಶ್ರೀ ತಾಯಿಗೆ ತನ್ನ ಮನೆಯಲ್ಲಿ ಸ್ವಾಮಿಯ ವೋಟರ್ ಐಡಿ ಕಾರ್ಡ್ ಸಿಕ್ಕಿತ್ತು. ಬಳಿಕ ಅದನ್ನು ತೆಗೆದುಕೊಂಡು ಸ್ವಾಮಿ ಮನೆಗೆ ಬಂದಿದ್ದಳು. ಆದರೆ, ಸ್ವಾಮಿಯ ಜತೆ ಮಗಳು ಮೇಘಶ್ರೀ ಇಲ್ಲದ ಹಿನ್ನೆಲೆಯಲ್ಲಿ ತಾಯಿ ಮಹದೇವಮ್ಮ ಪಾಂಡವಪುರ ಪೊಲೀಸರಿಗೆ ನಾಪತ್ತೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.
ಐದು ವರ್ಷದ ಹಿಂದೆಯೇ ಮೇಘಶ್ರೀ ಕೊಲೆ ಮಾಡಿ ಶವವನ್ನು ನಾಲೆಗೆ ಎಸದಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇಘಶ್ರೀ-ಸ್ವಾಮಿ ಪರಿಚಯ ಹೇಗೆ?
ಬೆಂಗಳೂರಿನ ಎಂಇಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮೇಘಶ್ರೀಗೆ ಮೂವರು ಯುವತಿಯರ ಪರಿಚಯವಾಗಿತ್ತು. ಬಳಿಕ ಇವರ ಸಂಬಂಧಿ ಪಾಂಡವಪುರ ತಾಲೂಕಿನ ಯುವಕನ ಟಿ.ಕೆ.ಸ್ವಾಮಿಯ ಪರಿಚಯ ಮೇಘಶ್ರೀಗೆ ಆಗಿದ್ದು, ಇದು ಪ್ರೇಮಕ್ಕೆ ತಿರುಗಿತ್ತು. 2015ರಲ್ಲಿ ಇವರಿಬ್ಬರೂ ಮದುವೆಯಾಗಿದ್ದರು. ಆದರೆ ಒಂದು ವರ್ಷದ ಬಳಿಕ ಮೇಘಶ್ರೀ ಈ ವಿಷಯವನ್ನು ತಾಯಿಗೆ ತಿಳಿಸಿದ್ದಳು.
ಇದನ್ನೂ ಓದಿ: ಚಿಕ್ಕಮ್ಮ ಎಂದು ಹೇಳಿ ಮಗುವನ್ನು ಕದ್ದಳು; ತಂಗಿಯ ಡಿಸ್ಚಾರ್ಜ್ಗೆ ಬಂದು ಸಿಕ್ಕಿಬಿದ್ದಳು…
‘ನಾನು ಊರಿಗೆ ಬಂದಾಗ ಗಂಡ ಮತ್ತು ಅವರ ತಂದೆ ಕುಮಾರ್ ಜಾತಿ ನಿಂದನೆ ಮಾಡುತ್ತಾರೆ. ಕಿರುಕುಳ ನೀಡುತ್ತಿದ್ದು, ನನ್ನನ್ನು ಕೊಲೆ ಮಾಡಲು ಯತ್ನಿಸುತ್ತಿದ್ದಾರೆ’ ಎಂದು ತಾಯಿ ಬಳಿ ಹೇಳಿಕೊಂಡಿದ್ದಳು. ಇದಾದ ಬಳಿಕ ನಾಲ್ಕೈದು ವರ್ಷದಿಂದ ಯಾವುದೇ ಫೋನ್ ಕರೆಯಾಗಲಿ, ಸಂಪರ್ಕವೇ ಇರಲಿಲ್ಲ. ಮಗಳಿಗಾಗಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಅ.10ರಂದು ಮನೆಯ ಬೀರುವನ್ನು ಸ್ವಚ್ಛಗೊಳಿಸುತ್ತಿದ್ದಾಗ ಟಿ.ಕೆ.ಸ್ವಾಮಿಯ ಚುನಾವಣಾ ಗುರುತಿನ ಚೀಟಿ ಸಿಕ್ಕಿತು. ಇದರ ಆಧಾರದ ಮೇಲೆ ಸ್ವಾಮಿ ಅವರ ಗ್ರಾಮಕ್ಕೆ ತೆರಳಿ ವಿಚಾರಿಸಿದೆವು. ಆಗ ನಮ್ಮ ಮಗಳನ್ನು ಕೊಲೆ ಮಾಡಿ ಮುಚ್ಚಿ ಹಾಕಿದ್ದಾರೆ ಎಂದು ಕೆಲ ಗ್ರಾಮಸ್ಥರು ತಿಳಿಸಿದರು ಎಂದು ತಾಯಿ ಮಹದೇವನ್ನು ಈ ಮೊದಲೇ ದೂರಿನಲ್ಲಿ ವಿವರಿಸಿದ್ದರು. (ದಿಗ್ವಿಜಯ ನ್ಯೂಸ್)
ಪ್ರೇಮ ವಿವಾಹವಾಗಿದ್ದ ಮಗಳು 5 ವರ್ಷದ ಹಿಂದೆಯೇ ನಾಪತ್ತೆ! ಗಂಡನ ಮನೆಯಲ್ಲಿದೆ ನಿಗೂಢ ರಹಸ್ಯ?