ಹೈದರಾಬಾದ್ : ‘ಪವಾಡ’ಸದೃಶವಾದ ಆಯುರ್ವೇದ ಔಷಧಿಯನ್ನು ಸೇವಿಸಿ ಸುಮಾರು 10 ನಿಮಿಷಗಳ ನಂತರ ಕರೊನಾದಿಂದ ಗುಣಮುಖನಾದೆ ಎಂದು ಹೇಳಿಕೊಂಡಿದ್ದ ವ್ಯಕ್ತಿಯೊಬ್ಬರು ಇಂದು ಆಂಧ್ರಪ್ರದೇಶದ ನೆಲ್ಲೋರಿನಲ್ಲಿ ನಿಧನರಾಗಿದ್ದಾರೆ. ನಿವೃತ್ತ ಮುಖ್ಯೋಪಾಧ್ಯಾಯ ಎನ್.ಕೋಟಯ್ಯ ಎಂಬುವರು ಮೃತರು.
ವೆಲ್ಲೋರಿನ ಕೃಷ್ಣಪಟ್ನಂನಲ್ಲಿ ಬೊನಿಗಿ ಆನಂದಯ್ಯ ಎಂಬ ಆಯುರ್ವೇದ ವೈದ್ಯರು ನೀಡಿದ ‘ಹರ್ಬಲ್ ಐ ಡ್ರಾಪ್’ ಪಡೆದ ಮೇಲೆ ತಾವು ಥಟ್ಟನೆ ಕೋವಿಡ್ನಿಂದ ಗುಣಮುಖರಾಗಿದ್ದಾಗಿ ಕೆಲವು ದಿನಗಳ ಹಿಂದೆ ಕೋಟಯ್ಯ ವಿಡಿಯೋ ಮಾಡಿ ಶೇರ್ ಮಾಡಿದ್ದರು. ವೈರಲ್ ಆದ ಈ ವಿಡಿಯೋದಿಂದ ಪ್ರಭಾವಿತರಾಗಿ ಸಾವಿರಾರು ಜನರು ಈ ಪವಾಡಸದೃಶ ಔಷಧಿಗಾಗಿ ಕೃಷ್ಣಪಟ್ನಂನಲ್ಲಿ ಸಾಲುಗಟ್ಟಲು ಆರಂಭಿಸಿದ್ದರು.
ಇದನ್ನೂ ಓದಿ: ಕರೊನಾ ರೂಪದಲ್ಲಿ ಎರಗಿದ ದುರಾದೃಷ್ಟ… ಎರಡನೇ ಬಾರಿ ತಬ್ಬಲಿಯಾದ ಅಂಧ ಬಾಲಕ !
“ಮೇ 28 ರ ರಾತ್ರಿ ಕೋಟಯ್ಯ ಅವರ ಆಕ್ಸಿಜನ್ ಮಟ್ಟ ಇಳಿದ ಕಾರಣದಿಂದ ನೆಲ್ಲೋರ್ ಸರ್ಕಾರಿ ಜನರಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರಿಗೆ ಹಲವು ಇತರ ಆರೋಗ್ಯ ಸಮಸ್ಯೆಗಳೂ ಇದ್ದವು. ಇಂದು ಮುಂಜಾನೆ ಮೃತಪಟ್ಟರು” ಎಂದು ಜನರಲ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಸುಧಾಕರ್ ರೆಡ್ಡಿ ಇಂಡಿಯಾ ಟುಡೆ ಟಿವಿಗೆ ತಿಳಿಸಿದ್ದಾರೆ.
ಮತ್ತೊಂದೆಡೆ, ಆನಂದಯ್ಯ ಅವರ ತಂಡದ ಮೂವರು ಸದಸ್ಯರಿಗೆ ರಾಪಿಡ್ ಆ್ಯಂಟಿಜನ್ ಟೆಸ್ಟ್ನಲ್ಲಿ ಕರೊನಾ ಪಾಸಿಟಿವ್ ಬಂದಿದೆ. ಸುಮಾರು 20 ಗ್ರಾಮಸ್ಥರು ಕರೊನಾ ರೋಗಲಕ್ಷಣಗಳನ್ನು ಪ್ರದರ್ಶಿಸಿದ್ದು, ಅವರ ಸ್ಯಾಂಪಲ್ಗಳನ್ನು ಆರ್ಟಿಪಿಸಿಆರ್ ಪರೀಕ್ಷೆಗೆ ಕಳುಹಿಸಲಾಗಿದೆ ಎನ್ನಲಾಗಿದೆ. ಆಂಧ್ರಪ್ರದೇಶ ಸಿಎಂ ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರು ಸ್ಥಳೀಯವಾದ ಆಯುರ್ವೇದಿಕ್ ಔಷಧಿಗೆ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಆಯುರ್ವೇದಿಕ್ ಸೈನ್ಸಸ್ನ ಅಧ್ಯಯನ ವರದಿಯ ಆಧಾರದ ಮೇಲೆ ಅನುಮತಿ ನೀಡಿದ್ದಾರೆ. ಆದಾಗ್ಯೂ ಆನಂದಯ್ಯ ಅವರು ತಯಾರಿಸಿರುವ ಐ ಡ್ರಾಪ್ಸ್ಗೆ ಅನುಮತಿ ಸಿಕ್ಕಿಲ್ಲ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. (ಏಜೆನ್ಸೀಸ್)