ನವದೆಹಲಿ: ಕೋವಿಡ್-19 ಲಾಕ್ಡೌನ್ ಎಲ್ಲ ಸ್ತರದ ಜನರ ಮೇಲೂ ಭಾರಿ ಪರಿಣಾಮವನ್ನುಂಟು ಮಾಡಿದೆ. ಅದರಲ್ಲೂ ಕೆಳಮಧ್ಯಮ ವರ್ಗ ಮತ್ತು ಬಡವರ ಪರಿಸ್ಥಿತಿ ಹೇಳತೀರದಾಗಿದೆ. ಇದರಿಂದಾಗಿ ಕೆಲವರು ತಮ್ಮ ಮಕ್ಕಳ ಮಾರಾಟ ಮಾಡಿ, ಕುಟುಂಬವನ್ನು ಸಲಹುವ ಪರಿಸ್ಥಿತಿ ತಲುಪಿದ್ದಾರೆ ಎಂಬುದು ಈ ಘಟನೆಯಿಂದ ತಿಳಿಯುತ್ತದೆ.
ಮೂಲತಃ ಅಸ್ಸಾಂನವರಾದ ದೀಪಕ್ ಬ್ರಹ್ಮ ಮತ್ತು ರೇಖಾ ಬ್ರಹ್ಮ ದಂಪತಿ ಗುಜರಾತ್ನಲ್ಲಿ ದಿನಗೂಲಿಗಳಾಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಇಬ್ಬರು ಮಕ್ಕಳು. ಮೊದಲ ಮಗುವಿಗೆ 1 ವರ್ಷವಾಗಿದ್ದರೆ, ಎರಡನೇ ಮಗುವಿಗೆ 4 ತಿಂಗಳು. ಕೋವಿಡ್-19 ಲಾಕ್ಡೌನ್ನಿಂದಾಗಿ ಕೆಲಸ ಇಲ್ಲದಂತೆ ಆದ ಬಳಿಕ ದಂಪತಿ ಕೋಕ್ರಾಜಾರ್ನ ಕುಂಟೌಳ ಎಂಬ ಕುಗ್ರಾಮಕ್ಕೆ ಮರಳಿದ್ದರು. ಇಲ್ಲಿ ಅವರು ತಮ್ಮ ಅಜ್ಜಿಯ ಮನೆಯಲ್ಲಿ ವಾಸಿಸುತ್ತಿದ್ದರು.
ಎಷ್ಟೇ ಹುಡುಕಿದರೂ ಕೆಲಸ ಸಿಗದಾಗಿದ್ದರಿಂದ, ಕುಟುಂಬ ನಿರ್ವಹಿಸಲು ದೀಪಕ್ ಭಾರಿ ಪಡಿಪಾಟಲು ಪಡುತ್ತಿದ್ದ. ಇಂಥ ಸಂದರ್ಭದಲ್ಲಿ ಈತನಿಗೆ ಮಕ್ಕಳ ಕಳ್ಳಸಾಗಣೆ ಮಾಡುವ ಪ್ರಣೀತಾ ನರ್ಜಾರಿ ಎಂಬ ಮಹಿಳೆಯ ಪರಿಚಯವಾಯಿತು. ಈಕೆಯ ಮಾತಿಗೆ ಮರುಳಾದ ದೀಪಕ್ ತನ್ನ 4 ತಿಂಗಳ ಮಗುವನ್ನು ಈಕೆಗೆ 45 ಸಾವಿರ ರೂ.ಗೆ ಮಾರಾಟ ಮಾಡಿ, ಹಣವನ್ನು ಪಡೆದುಕೊಂಡಿದ್ದ. ಆದರೆ, ಮಗುವನ್ನು ಕೊಟ್ಟಿರಲಿಲ್ಲ. ಈ ವಿಷಯವನ್ನು ಪತ್ನಿಗೂ ತಿಳಿಸಿರಲಿಲ್ಲ.
ಇದನ್ನೂ ಓದಿ: ಹೌಸ್ಟನ್ ಕಚೇರಿ ಮುಚ್ಚಿ ಎಂದರೆ, ನೀವು ಚೆಂಗ್ಡುನಲ್ಲಿರುವ ನಿಮ್ಮ ರಾಯಭಾರ ಕಚೇರಿ ಮುಚ್ಚಿ ಅನ್ನೋದೇ?
ಅದೊಂದು ದಿನ ನೇರವಾಗಿ ದೀಪಕ್ ಮನೆಗೆ ನುಗ್ಗಿದ ಪ್ರಣೀತಾ ನರ್ಜಾರಿ ರೇಖಾಳ ಮಡಿಲಲ್ಲಿದ್ದ ಮಗುವನ್ನು ಎತ್ತಿಕೊಂಡು ಹೋದಳು. ಅವರು ಏಕೆ ಹೀಗೆ ಮಾಡಿದಳು ಎಂಬುದು ಗೊತ್ತಿಲ್ಲದ ರೇಖಾ ಹುಯ್ಯಲೆಬ್ಬಿಸಿದ್ದಳು. ನರೆಹೊರೆಯವರೆಲ್ಲ ಜಮಾಯಿಸಿದರು. ಯಾರೋ ಕೊಟ್ಟ ಸಲಹೆಯಂತೆ ಕೋಕ್ರಜಾರ್ನ ಕೌಚುಹಾನ್ ಪೊಲೀಸ್ ಠಾಣೆಗೆ ದೂರುಕೊಟ್ಟಳು.
ದೂರು ದಾಖಲಿಸಿಕೊಂಡು ಎಫ್ಐಆರ್ ದಾಖಲಿಸುತ್ತಲೇ ನಮ್ಮ ಸಿಬ್ಬಂದಿ ಪ್ರಾಮಾಣಿಕವಾಗಿ ಕ್ರಮ ಕೈಗೊಂಡರು. ಮಗುವಿನ ತಂದೆ ದೀಪಕ್ ಬ್ರಹ್ಮನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಮಗುವನ್ನು ಮಾರಾಟ ಮಾಡಿರುವುದಾಗಿ ಹೇಳಿದ. ಈ ಹಿನ್ನೆಲೆಯಲ್ಲಿ ಆತನನ್ನು ಹಾಗೂ ಮಗುವನ್ನು ಖರೀದಿಸಿದ್ದ ಪ್ರಣೀತಾಳನ್ನು ಮೊದಲಿಗೆ ಬಂಧಿಸಲಾಯಿತು. ಅಲ್ಲದೆ, ರೇಖಾಳ ಬಳಿಯಿಂದ ಮಗುವನ್ನು ಅಪಹರಿಸಲು ಪ್ರಣೀತಾಳಿಗೆ ಸಹಾಯ ಮಾಡಿದವರನ್ನು ಕೂಡ ಬಂಧಿಸಲಾಯಿತು ಎಂದು ಕೋಕ್ರಾಜಾರ್ ಎಸ್ಪಿ ರಾಕೇಶ್ ರೋಷನ್ ತಿಳಿಸಿದ್ದಾರೆ.
ಕೋಕ್ರಜಾರ್ ಜಿಲ್ಲೆ ಕುಗ್ರಾಮದಿಂದ ಅಪಹರಿಸಲಾಗಿದ್ದ ಈ ಮಗುವನ್ನು ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ಢಿಪು ಎಂಬಲ್ಲಿ ಮಕ್ಕಳಿಲ್ಲದ ತನ್ನ ಸಹೋದರ ಸಂಬಂಧಿಗಳಿಗೆ ಪ್ರಣೀತಾ ಮಗುವನ್ನು ದತ್ತಕಕ್ಕೆ ಕೊಟ್ಟಿದ್ದು ಪತ್ತೆಯಾಯಿತು. ಮಗುವನ್ನು ರಕ್ಷಿಸಿ, ರೇಖಾಳಿಗೆ ಮರಳಿಸಲಾಗಿದೆ. ಇದೀಗ ಬಂಧಿತ ಮೂವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಬೇಲಿ ಮೇಲೆ ಕುಳಿತಿರುವವರು ಸ್ವಲ್ಪ ಆಚೀಚೆ ನೆಗೆದರೆ ಸಚಿನ್ ಪೈಲಟ್ ಸಿಎಂ