ಮುಂಬೈ: ತನ್ನ ಪತ್ನಿಯನ್ನು ತಾನೇ ಕೊಲೆ ಮಾಡಿ ಆಕೆಯ ಶವವನ್ನು ಹೂತ್ತಿಟ್ಟು, ನಾಪತ್ತೆ ಪ್ರಕರಣ ದಾಖಲಿಸಿದ ಪತಿರಾಯನನ್ನು ಆಲಿಭಾಗ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಆಲಿಭಾಗ್ ಜಿಲ್ಲೆಯ ಪಾಲಿ ತಾಲ್ಲೂಕಿನ ಉಂಬರವಾಡಿ ಅರಣ್ಯ ಪ್ರದೇಶದಲ್ಲಿ ಮಹಿಳೆಯ ಶವ ದೊರೆತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕುಸುಬಾ ಸಾಗರ್ ಪವಾರ್ (24) ಮೃತ ಮಹಿಳೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ನಿರೂಪಕರ ಬದಲು ಇಂಡಿಯಾ ಒಕ್ಕೂಟ ರಾಹುಲ್ ಗಾಂಧಿಗೆ ಬಹಿಷ್ಕಾರ ಹಾಕಿದರೆ ಒಳಿತು: ಬಿಜೆಪಿ
ಘಟನೆ ಕುರಿತು ಪ್ರತಿಕ್ರಿಯಿಸಿರುವ ಸ್ತಳೀಯ ಪೊಲೀಸ್ ಅಧಿಕಾರಿಯೊಬ್ಬರು ಆರಂಭದಲ್ಲಿ ಮಹಿಳೆಯ ಶವ ದೊರೆತ ಸಮಯದಲ್ಲಿ ಆರೋಪಿ ಪತಿ ಸಾಗರ್ ಪವಾರ್ ತನ್ನ ಪತ್ನಿಯನ್ನು ಗುರುತಿಸಲು ಹಿಂದೇಟು ಹಾಕಿದ್ದನು. ಬಳಿಕ ದಂಪತಿಯ ಆರು ವರ್ಷದ ಪುತ್ರ ತನ್ನ ತಾಯಿ ಧರಿಸಿದ್ದ ಬಟ್ಟೆ ಮೂಲಕ ಮೃತದೇಹವನ್ನು ಗುರುತು ಹಿಡಿದಿದ್ದಾನೆ.
ಕುಡಲೇ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆತ ಕೊಲೆ ಮಾಡಿ ಶವವನ್ನು ಪಾಲಿ ತಾಲ್ಲೂಕಿನಲ್ಲಿರುವ ಉಂಬರವಾಡಿಯ ಅರಣ್ಯ ಪ್ರದೇಶದಲ್ಲಿ ಎಸೆದಿದದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಯಾವ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂಬ ವಿಚಾರ ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.