ಕೋಲ್ಕತ: ಕರೊನಾ ವೈರಸ್ ಕ್ವಾರಂಟೈನ್ ಶಿಬಿರ ಅಳವಡಿಸುವ ವಿಚಾರದಲ್ಲಿ ಉಂಟಾದ ಗಲಾಟೆಯಿಂದಾಗಿ 40 ವರ್ಷದ ವ್ಯಕ್ತಿಯೊಬ್ಬ ಹತ್ಯೆಯಾಗಿರುವ ಘಟನೆ ಪಶ್ಚಿಮ ಬಂಗಾಳದ ಬಿರ್ಭಮ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಕೋಲ್ಕತದಿಂದ 180 ಕಿ.ಮೀ ದೂರವಿರುವ ಬಿರ್ಭಮ್ ಜಿಲ್ಲೆಗೆ ಸೇರಿದ ತಲಿಬಪುರ್ ಗ್ರಾಮದಲ್ಲಿ ಕ್ವಾರಂಟೈನ್ ಕ್ಯಾಂಪ್ ಅಳವಡಿಸಲು ಅಧಿಕಾರಿಗಳು ಮುಂದಾಗಿದ್ದರು. ಆದರೆ, ಶಾಲೆಗೆ ಹೊಂದಿಕೊಂಡ ಹಾಸ್ಟೆಲ್ನಲ್ಲಿ ಕ್ಯಾಂಪ್ ಅಳವಡಿಸಲು ಗ್ರಾಮದ ಒಂದು ಗುಂಪಿನ ಮಂದಿ ವಿರೋಧಿಸಿದರು. ಆದರೆ, ಮತ್ತೊಂದು ಗುಂಪು ಅಧಿಕಾರಿಗಳಿಗೆ ಬೆಂಬಲ ನೀಡಿದರು.
ಈ ವೇಳೆ ಎರಡು ಗುಂಪಿನ ನಡುವೆ ಗಲಭೆ ಉಂಟಾಗಿದೆ. ಒಬ್ಬರಿಗೊಬ್ಬರು ಸ್ಪೋಟಕಗಳನ್ನು ಎಸೆದಾಡಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಸೈಫುಲ್ ಶೇಖ್ ಎಂಬುವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಮಾರ್ಗ ಮಧ್ಯೆಯೇ ಸಾವಿಗೀಡಾಗಿರುವುದಾಗಿ ವೈದ್ಯರು ತಿಳಿಸಿದರೆಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ಉಲ್ಬಣಗೊಂಡಿದ್ದು, ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. (ಏಜೆನ್ಸೀಸ್)
ವಿದೇಶದಲ್ಲಿ ವ್ಯಾಸಂಗದ ಕನಸಿಗೆ ತಣ್ಣಿರೆರಚಿದ ಕರೊನಾ: ಪರೀಕ್ಷೆ ವಿಳಂಬ, ಪ್ರವೇಶ ಮರೀಚಿಕೆ