ಚಿಕ್ಕಮಗಳೂರು: ಕಾಫಿ ನಾಡಿನ ಕೆಲವೆಡೆ ಸೋಮವಾರ ರಾತ್ರಿಯಿಂದ ಮಂಗಳವಾರ ನಸುಕಿನವರೆಗೆ ಧಾರಾಕಾರ ಮಳೆಯಾಗಿದೆ. ನಗರದಲ್ಲಿ ರಾತ್ರಿ ಸುರಿದ ಮಳೆಗೆ ಎಪಿಎಂಸಿಯಲ್ಲಿ ಸುರಿದಿದ್ದ ಉತ್ತಮ ಟೊಮ್ಯಾಟೊ ಜತೆಗೆ ಆರಿಸಿ ಬಿಟ್ಟ ಹಣ್ಣುಗಳು ನೀರಿನಲ್ಲಿ ಕೊಚ್ಚಿಹೋಗಿ ಹೆದ್ದಾರಿಯಲ್ಲಿ ರಾಶಿಯಾಗಿ ಬಿದ್ದಿದ್ದು ದನಗಳು ತಿನ್ನುತ್ತಿವೆ.
ಎಪಿಎಂಸಿ ಆವರಣದ ಕ್ರೇಟ್ನಲ್ಲಿಟ್ಟಿದ್ದ ಟೊಮ್ಯಾಟೊ ನೀರಿನ ರಭಸಕ್ಕೆ ಕ್ರೇಟ್ ಸಮೇತ ಕೊಚ್ಚಿಹೋಗಿ ಕೆಎಂ ರಸ್ತೆ, ಚರಂಡಿಯಲ್ಲಿ ಬಿದ್ದಿದ್ದವು. ಮುಖ್ಯರಸ್ತೆಯ ಚರಂಡಿಯಲ್ಲಿ ಹಣ್ಣುಗಳು ಕೊಳೆತು ನಾರುತ್ತಿವೆ.
ಎಪಿಎಂಸಿಯಲ್ಲಿ ಕಂಟೈನರ್ ವ್ಯವಸ್ಥೆ ಇದ್ದಿದ್ದರೆ ಟೊಮ್ಯಾಟೊ ಹಣ್ಣು, ಹಾಳಾದ ತರಕಾರಿಗಳನ್ನು ಚರಂಡಿಗೆ ಹಾಕುವ ಪ್ರಮೇಯ ಬರುತ್ತಿರಲಿಲ್ಲ. ರಾಜ್ಯದ ಬೇರೆ ಮಾರುಕಟ್ಟೆಗಳಿಗೆ ಹೋಲಿಸಿದರೆ ನಗರದ ಎಪಿಎಂಸಿ ಉತ್ತಮವಾಗಿದೆ. ಹಾಗಾಗಿ ಹಾನಿಯಾದ ತರಕಾರಿಗಳನ್ನು ಹಾಕಲು ಆವರಣದಲ್ಲಿ 6 ಕಂಟೈನರ್ ಅಳವಡಿಸಿ ನಿತ್ಯ ಸಾಗಾಟ ಮಾಡಿದರೆ ಸ್ವಚ್ಛತೆ ಕಾಪಾಡಬಹುದು. ಜತೆಗೆ ಸೊಳ್ಳೆ ,ನೊಣಗಳು ಬಾರದಂತೆ ಸಾಂಕ್ರಾಮಿಕ ರೋಗ ತಡೆಗಟ್ಟಲು ಅನುಕೂಲವಾಗುತ್ತದೆ ಎಂದು ವರ್ತಕ ಹರೀಶ್ ಹೇಳಿದರು.
ಮಳೆಗೆ ಹನುಮಂತಪ್ಪ ವೃತ್ತ, ನೆಹರು ರಸ್ತೆ, ಬಸವನಹಳ್ಳಿ, ಗೃಹಮಂಡಳಿ ಬಡಾವಣೆ, ಬೈಪಾಸ್ ರಸ್ತೆಯ ಹಲವೆಡೆ ಚರಂಡಿಗಳು ಉಕ್ಕಿಹರಿದು ರಸ್ತೆಗಳು ಜಲಾವೃತವಾಗಿದ್ದವು. ನಗರದಲ್ಲಿ ಅಮೃತ್ ಯೋಜನೆ ಕಾಮಗಾರಿಗಾಗಿ ಗುಂಡಿ ಅಗೆದಿದ್ದು ಮಳೆ ನೀರಿನಿಂದ ಕೆಸರುಮಯವಾಗಿ ಬೆಳಗ್ಗೆ ಜನ ಓಡಾಡಲು ಪರದಾಡುವಂತಾಯಿತು.