ಅರಸೀಕೆರೆ: ತಾಲೂಕಿನ ಗಂಡಸಿ ಗ್ರಾಮದ ಸಮುದಾಯ ಭವನದಲ್ಲಿ ಕೃಷಿ ಇಲಾಖೆ ವತಿಯಿಂದ ಇತ್ತೀಚೆಗೆ ಕೇಂದ್ರ ಸರ್ಕಾರ ಪ್ರಾಯೋಜಿತ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎ.ಪಿ.ಶಿವಕುಮಾರ್ ಮಾತನಾಡಿ, ಉತ್ತಮ ಇಳುವರಿ ಪಡಯುವ ಬಿತ್ತನೆ ಬೀಜ ಹಾಗೂ ಕೃಷಿ ಪರಿಕರಗಳನ್ನು ಸರ್ಕಾರದ ನಿರ್ದೇಶನದಂತೆ ಪ್ರತಿ ವರ್ಷವೂ ವಿತರಣೆ ಮಾಡಲಾಗುತ್ತಿದೆ. ಪೈರಿಗೆ ಕಾಡುವ ರೋಗಬಾಧೆ ಸೇರಿ ಹಲವು ಸಮಸ್ಯೆಗಳ ಪರಿಹಾರಕ್ಕೆ ಹೋಬಳಿ ಕೇಂದ್ರಗಳಲ್ಲಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಹಿತಿ ನೀಡಲಾಗುತ್ತಿದೆ. ಅನ್ನದಾತರು ಸರ್ಕಾರ ಹಾಗೂ ಸಂಘ ಸಂಸ್ಥೆಗಳು ನೀಡುವ ನೆರವನ್ನು ಪಡೆದು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಮುಖ್ಯಸ್ಥೆ ಎಚ್.ಎಂ.ಯಶೋದಾ ಮಾತನಾಡಿ, ಬಜ್ ಇಂಡಿಯಾ ಮಹಿಳಾ ಸಂಸ್ಥೆಯು ಮಹಿಳೆಯರಿಗೆ ಹಣಕಾಸಿನ ನಿರ್ವಹಣೆ, ಉದ್ದಿಮೆಶೀಲತೆ ಹಾಗೂ ವೈಯಕ್ತಿಕ ಅಭಿವೃಧ್ಧಿಗೆ ಪೂರಕವಾಗಿ ತರಬೇತಿ ನೀಡುತ್ತಿದೆ. ಗ್ರಾಮೀಣ ಭಾಗದ ರೈತ ಮಹಿಳೆಯರು ಇಂತಹ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಉಪ ಯೋಜನಾ ನಿರ್ದೇಶಕಿ ಮಂಜುಳಾ ಕಾರ್ಯಕ್ರಮದ ರೂಪುರೇಷೆ ಕುರಿತು ಮಾಹಿತಿ ನೀಡಿದರು. ಬಜ್ಇಂಡಿಯಾ ಟ್ರಸ್ಟ್ ವ್ಯವಸ್ಥಾಪಕ ಜಿ.ಎಸ್.ವೆಂಕಟೇಶ್, ಗಂಡಸಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವೆಂಕಟೇಶ್ ಸೇರಿ ಹಲವರು ಪಾಲ್ಗೊಂಡಿದ್ದರು.