ಅರಸೀಕೆರೆ(ಗ್ರಾಮಾಂತರ): ಸುಕ್ಷೇತ್ರ ಆದಿಹಳ್ಳಿ ಆದಿಲಕ್ಷ್ಮೀ ಅಮ್ಮನವರ ಜಾತ್ರಾ ಮಹೋತ್ಸವವು ಏ.19 ರಿಂದ 21ರವರೆಗೆ ಜರುಗಲಿದೆ ಎಂದು ಆದಿಚುಂಚನಗಿ ಮಹಾ ಸಂಸ್ಥಾನ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ 115ನೇ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಪವಿತ್ರ ಹುಣ್ಣಿಮೆ ಕಾರ್ಯಕ್ರಮ ಸೇರಿದಂತೆ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಜರುಗಲಿದೆ ಎಂದು ವಿವರಿಸಿದರು.
19 ರಂದು ಮುಂಜಾನೆ ಪುಣ್ಯಾಹ, ರುದ್ರಾಭಿಷೇಕ, ಷೋಡೋಪಚಾರ, 20ರಂದು ಮುಂಜಾನೆ ದೇವಾಲಯ ಆವರಣದಲ್ಲಿ ಕೊಂಡೋತ್ಸವ ನಂತರ ಎಡೆ ಸೇವೆ ನಡೆಯಲಿದೆ. ಸಂಜೆ ಡಾ.ನಿರ್ಮಲಾನಂದನಾಥ ಶ್ರೀಗಳ ಸಾನ್ನಿಧ್ಯದಲ್ಲಿ 115ನೇ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಹುಣ್ಣಿಮೆ ಕಾರ್ಯಕ್ರಮ ನಡೆಯಲಿದೆ. ಆದಿಚುಂಚನಗಿ ಶಾಖಾ ಮಠದ ಸ್ವಾಮೀಜಿಗಳು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. ರಥೋತ್ಸವ: ಏ.20 ರಂದು ರಥೋತ್ಸವ ಹಾಗೂ ಸಿಡಿ ಉತ್ಸವ ಜರುಗಿದರೆ, 21ರಂದು ಬೆಳಗ್ಗೆ ಮಹಾ ರಥೋತ್ಸವ ನಡೆಯಲಿದೆ. ಆದಿಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳ ಗ್ರಾಮಸ್ಥರು ಪಾಲ್ಗೊಳ್ಳಲಿದ್ದು ಶ್ರೀಮಠದ ವತಿಯಿಂದ ದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.