ಹಾಸನ: ಹಾಸನದಲ್ಲಿ ನಡೆದಿದ್ದ ತಾಯಿ ಹಾಗೂ ಇಬ್ಬರು ಮಕ್ಕಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಟ್ವಿಸ್ಟ್ ಸಿಕ್ಕಿದ್ದು, ಮಹಿಳೆಯ ಸ್ನೇಹಿತನೆ ಕೊಲೆ ಮಾಡಿ ಪರಾರಿಯಾಗಿದ್ದ ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ನಿಂಗಪ್ಪ ಕಾಗವಾಡ ಎಂಬಾತನನ್ನು ಪೆನ್ಷನ್ ಮೊಹಲ್ಲಾ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಆರೋಪಿ ನಿಂಗಪ್ಪ ಹಣ ಕೊಡುವಂತೆ ಶಿವಮ್ಮನನ್ನು ಪೀಡಿಸುತ್ತಿದ್ದ. ಆಕೆ ಹಣ ಕೊಡಲು ನಿರಾಕರಿಸಿದಾಗ ಶಿವಮ್ಮನನ್ನು ಕತ್ತು ಹಿಸುಕಿ ಮಕ್ಕಳಾದ ಪವನ್(10), ಸಿಂಚನಾ(8) ಹತ್ಯೆ ಮಾಡಿ ಪರಾರಿಯಾಗಿದ್ದ.
ಮೊದಲಿಗೆ ಆತ್ಮಹತ್ಯೆ ಎಂದು ಕಂಡು ಬಂದಿತ್ತು. ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸಿದಾಗ ಕೊಲೆ ಎಂದು ಬೆಳಕಿಗೆ ಬಂದಿತ್ತು. ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಶೀಘ್ರದಲ್ಲೇ ಚಾರ್ಜ್ಶೀಟ್ ಸಿದ್ದಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಡೇವಿಡ್ ವಾರ್ನರ್ಗೆ ಭಾವನಾತ್ಮಕ ಬೀಳ್ಕೊಡುಗೆ
ಪ್ರಕರಣದ ಹಿನ್ನಲೆ
ಜ.01ರಂದು ಹಾಸನ ಹೊರವಲಯದ ದಾಸರಕೊಪ್ಪಲಿನ ಮನೆಯೊಂದರಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ನಿಗೂಡ ರೀತಿಯಲ್ಲಿ ಮೃತಪಟ್ಟಿದ್ದರು. ಬೇಕರಿ ಕೆಲಸಕ್ಕೆ ತುಮಕೂರಿಗೆ ಹೋಗಿದ್ದ ಪತಿ ಮನೆಗೆ ಬಂದು ನೋಡಿದಾಗ ಘಟನೆ ಬಯಲಾಗಿತ್ತು. ಪ್ರಕರಣದಲ್ಲಿ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು ಇದು ಕೊಲೆಯೋ ಆತ್ಮಹತ್ಯೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದರು.
ಮೃತ ಶಿವಮ್ಮ ಪತಿ ತೀರ್ಥಪ್ರಸಾದ್ ಅವರು ಬಿಜಾಪುರದಲ್ಲಿ ಬೇಕರಿ ಇಟ್ಟಿದ್ದರು. ಈ ವೇಳೆ ಬಿಜಾಪುರ ಮೂಲದ ನಿಂಗಪ್ಪ ಕಾಗವಾಡ ಹಾಗೂ ಶಿವಮ್ಮನ ಸ್ನೇಹ ಬೇಳೆದಿತ್ತು. ಬಿಜಾಪುರದಲ್ಲಿ ಬೇಕರಿ ಲಾಸ್ ಆಗಿದ್ದರಿಂದ ಮುಚ್ಚಿ ವಾಪಸ್ ಬಂದು ತುಮಕೂರಿನ ಬೇಕರಿಯಲ್ಲಿ ಶಿವಮ್ಮ ಪತಿ ತೀರ್ಥ ಕೆಲಸ ಮಾಡುತ್ತಿದ್ದರು. ದೂರವಿದ್ದ ಗಂಡನಿಗೆ ಮರೆಮಾಚಿ ಗೆಳೆಯ ನಿಂಗಪ್ಪನ ಜೊತೆ ಶಿವಮ್ಮ ಸಲುಗೆಯಿಂದಿದ್ದರು.
ಗಂಡ ಬೇಕರಿ ಕೆಲಸಕ್ಕೆ ಆಚೆ ಹೋಗಿದ್ದಾನೆಂದು ಹೊಸ ವರ್ಷಾಚರಣೆಗೆ ಶಿವಮ್ಮ ತನ್ನ ಸ್ನೇಹಿತನನ್ನು ಮನೆಗೆ ಕರೆಸಿಕೊಂಡಿದ್ದರು. ಈ ವೇಳೆ ಮೃತ ಶಿವಮ್ಮ ಹಾಗೂ ಆರೋಪಿ ನಡುವೆ ಹಣಕ್ಕೆ ಜಗಳವಾಗಿದೆ. ಆರೋಪಿ ಹಣ ನೀಡುವಂತೆ ಪೀಡಿಸಿದ್ದಾನೆ. ನಿರಾಕರಿಸಿದಕ್ಕೆ ಕತ್ತು ಹಿಸುಕಿ ಶಿವಮ್ಮ ಕೊಲೆ ಮಾಡಿದ್ದಾನೆ. ಬಳಿಕ ಮಕ್ಕಳಾದ ಸಿಂಚನಾ, ಪವನ್ ಹತ್ಯೆ ಮಾಡಿ ಅಡುಗೆ ಸಿಲಿಂಡರ್ ಪೈಪ್ ತೆಗೆದು ಶಿವಮ್ಮನ ಮೊಬೈಲ್, ತಾಳಿ ಸರದೊಂದಿಗೆ ಎಸ್ಕೇಪ್ ಆಗಿದ್ದಾನೆ. ಮರು ದಿನ ಶಿವಮ್ಮ ಪತಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.