ನವದೆಹಲಿ: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಕೇಳಿಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ “ಲೋಕಸಭಾ ನೈತಿಕ ಸಮಿತಿ” ಅಕ್ಟೋಬರ್ 31ರ ಬದಲಾಗಿ ನವೆಂಬರ್ 2ರಂದು ವಿಚಾರಣೆಗೆ ಹಾಜರಾಗುವಂತೆ ಸಂಸದೆಗೆ ಶನಿವಾರ (ಅ.28) ನೋಟಿಸ್ ನೀಡಿದೆ. ಅಲ್ಲದೆ, ದಿನಾಂಕ ವಿಸ್ತರಣೆ ವಿನಾಯಿತಿ ಇರುವುದಿಲ್ಲ ಎಂದು ಖಚಿತಪಡಿಸಿದೆ.
ಅ. 31ರಂದು ಬರಲು ಸಾಧ್ಯವಿಲ್ಲ, ಹೀಗಾಗಿ ನ.5ರಂದು ವಿಚಾರಣೆಗೆ ಹಾಜರಾಗಲು ಅನುಮತಿ ಕೋರಿ ಲೋಕಸಭಾ ನೈತಿಕ ಸಮಿತಿಗೆ ಮಹುವಾ ಪತ್ರ ಬರೆದಿದ್ದರು. ಇದೀಗ ಪ್ರತಿಕ್ರಿಯೆ ನೀಡಿರುವ ಸಮಿತಿ ನ.2ರಂದು ಬರುವಂತೆ ತಿಳಿಸಿದೆ.
ನೈತಿಕ ಸಮಿತಿ ಮುಂದೆ ದೈಹಿಕವಾಗಿ ಹಾಜರಾಗಿ, ತಮ್ಮ ವಿರುದ್ಧದ ಆರೋಪಗಳಿಗೆ ಸೂಕ್ತ ಉತ್ತರ ನೀಡಲು ಉತ್ಸಾಹದಿಂದ ಎದುರು ನೋಡುತ್ತಿರುವುದಾಗಿ ಮತ್ತು ತಮ್ಮ ವಿರುದ್ಧ ಗಂಭೀರ ಆರೋಪ ಮಾಡಿರುವ ಉದ್ಯಮಿ ದರ್ಶನ್ ಹಿರಾನಂದನಿ ಅವರನ್ನು ಕ್ರಾಸ್ ಕ್ವಶ್ಚನ್ ಮಾಡಲು ಅವಕಾಶ ನೀಡಬೇಕೆಂದು ನೈತಿಕ ಸಮಿತಿಯ ಮುಖ್ಯಸ್ಥ ವಿನೋದ್ ಸೋಂಕರ್ ಅವರಿಗೆ ಬರೆದಿರುವ ಪತ್ರದಲ್ಲಿ ಮಹುವಾ ಕೋರಿದ್ದರು.
ಉದ್ಯಮಿ ಹಿರಾನಂದನಿ ಅವರು ಸಹ ಸಮಿತಿಯ ಮುಂದೆ ಹಾಜರಾಗಬೇಕು ಮತ್ತು ನನಗೆ ನೀಡಿರುವುದಾಗಿ ಆರೋಪಿಸಲಾದ ಉಡುಗೊರೆಗಳು ಮತ್ತು ಕೊಡುಗೆಗಳ ವಿವರವಾದ ಪಟ್ಟಿಯನ್ನು ಒದಗಿಸಬೇಕು ಎಂದು ಮಹುವಾ ಒತ್ತಾಯಿಸಿದ್ದರು. ಅ.31ರ ಬದಲಾಗಿ ನ.5ಕ್ಕೆ ಬರುವುದಾಗಿ ಹೇಳಿದ್ದರು. ಆದರೆ, ಸಮಿತಿ ಮೂರು ದಿನಗಳ ಕಾಲಾವಕಾಶವನ್ನು ಮಾತ್ರ ವಿಸ್ತರಣೆ ಮಾಡಿದೆ. ಅಲ್ಲದೆ, ಮತ್ತೆ ವಿಸ್ತರಣೆ ಕೇಳುವಂತಿಲ್ಲ ಎಂದು ಖಡಕ್ ಆಗಿ ಹೇಳಿದೆ.
Cash-for-query case: Lok Sabha Ethics Committee asks TMC MP Mahua Moitra to appear before the Committee on November 2. pic.twitter.com/dMNxazUYYU
— ANI (@ANI) October 28, 2023
ಏನಿದು ಪ್ರಕರಣ?
ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ಹಿರಾನಂದಿನ ಬಳಿ ಮಹುವಾ ಮೊಯಿತ್ರಾ ಅವರು ಲಂಚವನ್ನು ಸ್ವೀಕರಿಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಆರೋಪ ಮಾಡಿದ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ. ಮೊಯಿತ್ರಾ ಮತ್ತು ಉದ್ಯಮಿ ಹಿರಾನಂದಾನಿ ನಡುವೆ ಲಂಚ ವಿನಿಮಯವಾಗಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದಿರುವ ದುಬೆ, ಸುಪ್ರೀಂಕೋರ್ಟ್ ವಕೀಲ ಜೈ ಅನಂತ್ ದೇಹದ್ರಾಯ್ ಅವರ ಪತ್ರವನ್ನು ಉಲ್ಲೇಖಿಸಿದ್ದಾರೆ. ಇದರ ನಡುವೆ ಕಳೆದ ಗುರುವಾರ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್, ಸಮಿತಿಯ ಮುಂದೆ ಸಂಸದೆ ವಿರುದ್ಧವಾಗಿ ಮೌಖಿಕ ಸಾಕ್ಷ್ಯಾಧಾರಗಳನ್ನು ಸಲ್ಲಿಸಿದ್ದಾರೆ.
ದುಬೆ ಮತ್ತು ದೇಹಾದ್ರಾಯಿ ಅವರು ತಮ್ಮ ವಿರುದ್ಧ ಹೊರಿಸಿರುವ “ಸುಳ್ಳು, ದುರುದ್ದೇಶಪೂರಿತ ಮತ್ತು ಮಾನಹಾನಿಕರ ಆರೋಪಗಳ” ವಿರುದ್ಧ ತನ್ನನ್ನು ತಾನು ಸಮರ್ಥಿಸಿಕೊಳ್ಳಲು “ನ್ಯಾಯಯುತವಾದ ವಿಚಾರಣೆ ಮತ್ತು ಸಾಕಷ್ಟು ಅವಕಾಶ” ನೀಡಬೇಕು ಎಂದು ಮಹುವಾ ಮೊಯಿತ್ರಾ ಸಮಿತಿ ಮುಂದೆ ಹೇಳಿದ್ದಾರೆ. ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚವನ್ನು ಸ್ವೀಕರಿಸಿದ್ದಾರೆ ಎಂದು ಮಹುವಾ ವಿರುದ್ಧ ಆರೋಪಿಸಿದ್ದಲ್ಲದೆ, ಅವರ ಲೋಕಸಭೆಯ ಲಾಗಿನ್ ಐಡಿಗಳನ್ನು ಸಹ ಉದ್ಯಮಿಯೊಂದಿಗೆ ಹಂಚಿಕೊಂಡಿದ್ದಾರೆ ಎಂದು ದುಬೆ ಆರೋಪ ಮಾಡಿದ್ದಾರೆ. ಆದರೆ, ಇದಕೆಲ್ಲ ದಾಖಲೆಗಳನ್ನು ಮುಂದಿಟ್ಟು ಮಾತನಾಡಿ ಎಂದು ಮಹುವಾ ತಿರುಗೇಟು ನೀಡಿದ್ದಾರೆ. ಅಲ್ಲದೆ, ನನ್ನ ವಿರುದ್ಧ ಷಡ್ಯಂತ್ರ ರೂಪಿಸಲು ಸರ್ಕಾರವೇ ತರಬೇತಿ ನೀಡಿದೆ ಎಂದು ಮಹುವಾ ಆರೋಪ ಮಾಡಿದ್ದಾರೆ. (ಏಜೆನ್ಸೀಸ್)
ಸಂಸತ್ತಿನ ಲಾಗಿನ್ ಐಡಿ, ಪಾಸ್ವರ್ಡ್ ಶೇರ್: ಟಿಎಂಸಿ ಸಂಸದೆ ವಿರುದ್ಧ ಮತ್ತೊಂದು ಗಂಭೀರ ಆರೋಪ
ಉದ್ಯಮಿಯಿಂದ ಲಂಚ ಪಡೆದ ಪ್ರಕರಣ; ಸಂಸದೆ ಮಹುವಾ ಮೊಯಿತ್ರಾಗೆ ಮತ್ತೊಮ್ಮೆ ಹಿನ್ನಡೆ
https://www.vijayavani.net/wp-content/uploads/2023/10/mahua-moitra-.webp