ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಮಂದಿಯ ವಿಚಾರಣೆ ನಡೆಸುತ್ತಿರುವ ಮುಂಬೈ ಪೊಲೀಸರು ಸೋಮವಾರ ಹಿರಿಯ ನಿರ್ಮಾಪಕ, ನಿರ್ದೇಶಕ ಮಹೇಶ್ ಭಟ್ ಅವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೆ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಲಾಗಿದೆ.
ಇದೇ ವಿಷಯವಾಗಿ ಶೀಘ್ರದಲ್ಲೇ ಕರಣ್ ಜೋಹರ್ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಈಗಾಗಲೆ ಇವರ ಮ್ಯಾನೇಜರ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಮುಂಬೈ ಪೊಲೀಸ್ ಮೂಲಗಳು ಹೇಳಿವೆ.
ಸುಶಾಂತ್ ಆತ್ಮಹತ್ಯೆ ಪ್ರಕರಣದಲ್ಲಿ ಕರಣ್ ಜೋಹರ್ ಅವರ ಹೆಸರು ಜೋರಾಗಿ ಕೇಳಿಬಂದಿತ್ತು. ಅಲ್ಲದೆ, ಇವರ ವಿರುದ್ಧ ಸ್ವಜನಪಕ್ಷಪಾತದ ಆರೋಪವೂ ಇದೆ. ಆದ್ದರಿಂದ, ಮೊದಲಿಗೆ ಅವರ ಮ್ಯಾನೇಜರ್ ಅನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಹೇಳಿವೆ.
ಇವರ ವಿಚಾರಣೆಯ ಬಳಿಕ ಕರಣ್ ಜೋಹರ್ ವಿಚಾರಣೆ ನಡೆಸುವ ಅವಶ್ಯಕತೆಯನ್ನು ನಿರ್ಧರಿಸಲಾಗುವುದು. ಬಳಿಕ ಕರಣ್ ಜೋಹರ್ ಅವರನ್ನು ವಿಚಾರಣೆಗೆ ಕರೆಸಲಾಗುವುದು ಎಂದು ತಿಳಿಸಿವೆ.
ಇದನ್ನೂ ಓದಿ: ನೀನು ಬಿ-ಗ್ರೇಡ್ ನಟಿಯಲ್ಲ … ಹಾಗಂತ ತಾಪ್ಸಿಗೆ ಹೇಳಿದ್ದು ಯಾರು?
ಮಹೇಶ್ ಭಟ್ ಅವರಿಗೆ ಬಾಂದ್ರಾ ಪೊಲೀಸ್ ಠಾಣೆಗೆ ಬರಲು ಸೂಚಿಸಲಾಗಿದೆ. ಮಧ್ಯಾಹ್ನ 12 ಗಂಟೆಗೆ ಬರಲು ಸೂಚಿಸಿದ್ದು, ಅಲ್ಲಿಗೆ ಬಂದಾಗ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಹೇಳಿವೆ.
ವಹಿವಾಟಿನ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ. ಬಾಲಿವುಡ್ನಲ್ಲಿ ಹೊರಗಿನ ಪ್ರತಿಭೆಗಳನ್ನು ಹೊಸಕುವ ಕೆಟ್ಟ ಸಂಪ್ರದಾಯ ಮತ್ತು ದುಷ್ಟಕೂಟ ಏನಾದರು ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿವೆ.
ಮಾಹಿತಿಯ ಪ್ರಕಾರ ಒಟ್ಟು 39 ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಸಿನಿವಿಮರ್ಶಕ ರಾಜೀವ್ ಮಸಾಮಡ್, ನಿರ್ದೇಶಕ-ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ, ಚಿತ್ರನಿರ್ಮಾಪಕ ಆದಿತ್ಯ ಚೋಪ್ರಾ ಅಲ್ಲದೆ, ಸುಶಾಂತ್ ಸಿಂಗ್ ರಜಪೂತ್ ಜತೆ ಸಂಪರ್ಕ ಹೊಂದಿದ್ದವರು, ಸ್ನೇಹಿತರು ಕೂಡ ಇದರಲ್ಲಿ ಸೇರಿದ್ದಾರೆ.