ಮುಂಬೈ: ಪುಲ್ವಾಮಾ ದಾಳಿಯಲ್ಲಿ ಈವರೆಗೆ 40 ಸಿಆರ್ಪಿಎಫ್ ಯೋಧರು ಮೃತ ಪಟ್ಟಿದ್ದಾರೆ. ಆದರೆ ಸ್ಫೋಟಕ್ಕೆ ಬಳಸಿದ ಆರ್ಡಿಎಕ್ಸ್ ಎಲ್ಲಿಂದ ಬಂತು ಎಂದು ಇನ್ನೂ ತಿಳಿದಿಲ್ಲ ಎಂದು ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಈವರೆಗೆ ಇನ್ನು ಒಂದು ತನಿಖೆ ನಡೆಸಿಲ್ಲ. ಅಲ್ಲಿಗೆ ವಾಹನ ಬಂದದ್ದು ಹೇಗೆ? ವಾಹನದ ಚಾಲಕ ಜೈಲಿನಲ್ಲಿದ್ದ. ಆದರೆ ಈಗ ಆತ ಹೊರ ಬಂದದ್ದು ಹೇಗೆ ಎಂದು ಕೇಳಿದರು.
ದಾಳಿ ನಡೆದು ವರ್ಷವಾದರೂ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಬೇಕಿದೆ. ಇದನ್ನೆಲ್ಲವನ್ನು ಜನರ ಮುಂದೆ ಉತ್ತರಿಸುವುದು ಜವಾಬ್ದಾರಿ ಎಂದರು.
2019ರ ಫೆ.14ರಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಯೋಧರನ್ನು ಜಮ್ಮುವಿನಿಂದ ಶ್ರೀನಗರಕ್ಕೆ ರವಾನಿಸಲಾಗುತ್ತಿತ್ತು. ಸುಮಾರು 2,500ಕ್ಕಿಂತ ಹೆಚ್ಚು ಯೋಧರನ್ನು ಒಳಗೊಂಡಿದ್ದ 78 ವಾಹನಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲಾಗಿ ಶ್ರೀನಗರದ ಕಡೆಗೆ ಸಂಚರಿಸುತ್ತಿದ್ದವು.
ಮಧ್ಯಾಹ್ನ 3.15ರ ಸುಮಾರಿಗೆ ವಾಹನಗಳು ಅವಂತಿಪೋರಾದ ಲೆತ್ಪೋರಾ ಬಳಿ ಬರುತ್ತಿದ್ದಂತೆ ಎದುರಿನಿಂದ ಬಂದ ಕೆಂಪು ಬಣ್ಣದ ಮಾರುತಿ ಕಾರೊಂದು 40 ಜನ ಯೋಧರಿದ್ದ ವಾಹನವೊಂದಕ್ಕೆ ಡಿಕ್ಕಿ ಹೊಡೆಯಿತು. ಭಾರಿ ಸ್ಫೋಟ ಸಂಭವಿಸಿ, ಯೋಧರ ದೇಹಗಳು ಚಿದ್ರ ಚಿದ್ರವಾಗಿದ್ದವು.
ಪಾಕಿಸ್ತಾನದ ಪ್ರಮುಖ ಉಗ್ರ ಮೌಲಾನಾ ಮಸೂದ್ ಅಜರ್ನ ಜೈಷ್ ಸಂಘಟನೆ ನಡೆಸಿದ ಈ ದಾಳಿಗೆ ಇಡೀ ದೇಶವೇ ಬೆಚ್ಚಿಬಿದ್ದಿತ್ತು. (ಏಜೆನ್ಸೀಸ್)