ಮಹಾಲಿಂಗಪುರ: ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗಾಂಧಿ ಗ್ರಾಮ ಸ್ವರಾಜ್ಯದ ಕನಸು ನನಸಾಗಿಸಲು ಯತ್ನಿಸುತ್ತಿದ್ದಾರೆ ಎಂದು ಹಿಂದು ಜಾಗರಣಾ ವೇದಿಕೆ ಸಂಚಾಲಕ ಶ್ರೀಶೈಲಗೌಡ ಪಾಟೀಲ ಹೇಳಿದರು.
ಪಟ್ಟಣದ ನೀಲಕಂಠೇಶ್ವರ ಸಾಂಸ್ಕೃತಿಕ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಶ್ರದ್ಧಾಕೇಂದ್ರಗಳಿಗೆ ಕಸದ ತೊಟ್ಟಿಗಳ ವಿತರಣೆ ಹಾಗೂ ಶಾಲಾ ಮಕ್ಕಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ವಿತರಣೆ ಸಮಾರಂಭದ ಅವರು ಮಾತನಾಡಿದರು.
ಹೆಗ್ಗಡೆ ಅವರು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅದರಂತೆ ನಾವೆಲ್ಲರೂ ದೇವಸ್ಥಾನ ಸೇರಿ ಗ್ರಾಮದ ಸಂಪೂರ್ಣ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಮಹೇಶ ಎಂ.ಡಿ., ತಾಲೂಕು ಅಧಿಕಾರಿ ಧನಂಜಯಕುಮಾರ ಮಾತನಾಡಿ, ರಾಜ್ಯದ 9 ಸಾವಿರ ಶ್ರದ್ಧಾ ಕೇಂದ್ರಗಳಿಗೆ 1.7 ಕೋಟಿ ರೂ. ವೆಚ್ಚದಲ್ಲಿ ಕಸದ ತೊಟ್ಟಿಗಳನ್ನು ವಿತರಿಸಲಾಗುತ್ತಿದೆ. ಹಲವು ಯೋಜನೆಗಳ ಮೂಲಕ ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ ಎಂದರು.
ಮುಧೋಳ ತಾಲೂಕಿನ 70 ದೇವಸ್ಥಾನಗಳಿಗೆ ಎರಡೆರಡು ಕಸದ ತೊಟ್ಟಿಗಳು, 12 ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮಂಜೂರು ಪತ್ರ ಹಾಗೂ ಸಂಗಾನಟ್ಟಿ ಸ್ಮಶಾನ ಅಭಿವೃದ್ಧಿಗಾಗಿ 2 ಲಕ್ಷ ರೂ. ಅನುದಾನದ ಚೆಕ್ನ್ನು ವಿತರಿಸಲಾಯಿತು.
ನೀಲಕಂಠೇಶ್ವರ ಟ್ರಸ್ಟ್ ಅಧ್ಯಕ್ಷ ಮಹಾದೇವಪ್ಪ ಬರಗಿ, ಪತ್ರಕರ್ತ ಚಂದ್ರಶೇಖರ ಮೋರೆ, ಮದಭಾಂವಿ ಗ್ರಾಪಂ ಸದಸ್ಯ ರಾಜು ಸೈದಾಪುರ, ಪ್ರಭು ಹುದ್ದಾರ, ಕಾಳಮ್ಮ ಕೇದಾರಿ ಮಾತನಾಡಿದರು. ಗಣ್ಯ ವರ್ತಕ ಅಶೋಕ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಸೈದಾಪುರ ಗ್ರಾಪಂ ಅಧ್ಯಕ್ಷ ಮಹಾಲಿಂಗ ಸನದಿ, ದುಂಡಪ್ಪ ಜೈನಾಪುರ, ನಾಗಪ್ಪ ಮಿರ್ಜಿ, ಸೇವಾ ಪ್ರತಿನಿಧಿಗಳಾದ ಭಾರತಿ ಕೀರಪುರ, ಶಿಲ್ಪಾ ಭಾಂವಿಕಟ್ಟಿ, ಶೋಭಾ ಬಿದರಿ, ಶಿವಲೀಲಾ ಮದಭಾಂವಿ ಸೇರಿ ಹಲವರು ಇದ್ದರು.
ಯೋಜನೆಯ ಮೇಲ್ವಿಚಾರಕ ಸೋಮಲಿಂಗ ಗರಗ ಸ್ವಾಗತಿಸಿ, ನಿರೂಪಿಸಿದರು. ಎಚ್.ಲೋಕೇಶ ವಂದಿಸಿದರು.