ಮಹಾಲಿಂಗಪುರ: ಪಟ್ಟಣದ ಅನೇಕ ಸರ್ಕಾರಿ ಪ್ರಾಥಮಿಕ ಶಾಲೆಗಳು ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು, ಕನಿಷ್ಠ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸ್ಥಳೀಯ ಪುರಸಭೆ ಮಾಜಿ ಸದಸ್ಯ ಜಿ.ಎಸ್.ಗೊಂಬಿ ಶಿಕ್ಷಣ ಸಚಿವರಿಗೆ ಆಗ್ರಹಿಸಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಬುಧವಾರ ಮನವಿ ಅರ್ಪಿಸಿದ ವೇಳೆ ಮಾತನಾಡಿದರು. ಶಾಲೆಗಳಲ್ಲಿ ಕುಡಿಯುವ ನೀರು, ಶೌಚಗೃಹ, ಸುಸಜ್ಜಿತ ಅಡುಗೆ ಕೋಣೆ, ಆಟದ ಮೈದಾನ ಸೇರಿ ಇಲಾಖೆಯಿಂದ ದೊರೆಯಬಹುದಾದ ಸೌಲಭ್ಯಗಳನ್ನು ಒದಗಿಸಬೇಕೆಂದು ವಿನಂತಿಸಿದರು.
ಶಾಸಕ ಸಿದ್ದು ಸವದಿ ಮಾತನಾಡಿ, ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಲಾಗಿದ್ದು, ಶಾಲೆಗಳ ಸುಧಾರಣೆಗೆ ಅನುಕೂಲ ಮಾಡಿಕೊಡಬೇಕೆಂದರು.
ಪಟ್ಟಣದ ಗಣ್ಯರಾದ ಲಕ್ಕಪ್ಪ ಚಮಕೇರಿ, ಗುರುಪಾದ ಅಂಬಿ ಇದ್ದರು.