ಮಧುಗಿರಿ: ಹಣದಾಸೆಗೆ ಸತ್ತ ವ್ಯಕ್ತಿಯ ಹೆಸರಿನಲ್ಲಿ ಸಾರ್ವಜನಿಕ ಆಸ್ಪತ್ರೆ ವೈದ್ಯರ ಸಹಿಯೊಂದಿಗೆ ವಯಸ್ಸಿನ ನಕಲಿ ದೃಢೀಕರಣ ಪತ್ರ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಆಸ್ಪತ್ರೆಯಲ್ಲಿ ಹಣಕ್ಕಾಗಿ ವಯಸ್ಸಿನ ಮತ್ತು ಅಂಗವಿಕಲ ದೃಢೀಕರಣ ಪತ್ರ ನೀಡುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿದ್ದವಾದರೂ ಪ್ರಕರಣಗಳು ಅಲ್ಲಲ್ಲೇ ಮುಚ್ಚಿ ಹೋಗುತ್ತಿದ್ದವು. ಆದರೆ, ಈಗ ಆಸ್ಪತ್ರೆ ವೈದ್ಯರೇ ಹಣದ ಆಸೆಗೆ ದೃಢೀಕರಣ ಪತ್ರ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ತುಮಕೂರು ಜಿಲ್ಲೆ ಮಧುಗಿರಿ ಪಟ್ಟಣದ ಲಿಂಗೇನಹಳ್ಳಿ ಬಡಾವಣೆಯ ಹನುಮಂತರಾಯಪ್ಪ ಎಂಬುವರು 2018ರಲ್ಲಿ ನಿಧನರಾಗಿದ್ದಾರೆ. ಇವರ ಮಗ ಮಹೇಶ್ ಎಂಬುವರು ಆಸ್ಪತ್ರೆಯ ಭ್ರಷ್ಟಾಚಾರ ಬಯಲಿಗೆಳೆಯಲು ಆಸ್ಪತ್ರೆ ನೌಕರನೆಂದು ಹೇಳಿಕೊಳ್ಳುವ ರಾಜಣ್ಣ ಎಂಬಾತನನ್ನು ಸಂಪರ್ಕಿಸಿ, ತಂದೆಯ ವಯಸ್ಸಿನ ದೃಢೀಕರಣ ಪತ್ರ ಕೇಳಿದ್ದಾರೆ. ಆಗ ರಾಜಣ್ಣ 5 ಸಾವಿರ ರೂ. ಬೇಡಿಕೆಯಿಟ್ಟಿದ್ದು, ಮಹೇಶ್ ಹಣದೊಂದಿಗೆ ತಂದೆಯ ಆಧಾರ್ಕಾರ್ಡ್ ನೀಡಿದ್ದಾರೆ. ಹಣ ಪಡೆದ ರಾಜಣ್ಣ, ಸತ್ತ ಹನುಮಂತರಾಯಪ್ಪನ ಹೆಸರಿನಲ್ಲಿ ವಯಸ್ಸಿನ ದೃಢೀಕರಣ ಪತ್ರವನ್ನು ಇಬ್ಬರು ವೈದ್ಯರ ಸಹಿ ಹಾಗೂ ಕಚೇರಿ ಮೊಹರಿನೊಂದಿಗೆ ಕೊಟ್ಟಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜಣ್ಣ ಸೇರಿ ವೈದ್ಯರಿಬ್ಬರ ವಿರುದ್ಧ ಮಧುಗಿರಿ ಠಾಣೆಯಲ್ಲಿ ಮಹೇಶ್ ದೂರು ನೀಡಿದ್ದಾರೆ. ಈ ಮಧ್ಯೆ ಸಾರ್ವಜನಿಕ ಆಸ್ಪತ್ರೆಯ ಸೀಲು ಮತ್ತು ವೈದ್ಯರ ಸಹಿಯನ್ನು ಕೆಲವರು ನಕಲು ಮಾಡುತ್ತಿದ್ದು, ಈ ಬಗ್ಗೆ ಮಧುಗಿರಿ ಡಿವೈಎಸ್ಪಿ ಕಚೇರಿಗೆ ದೂರು ನೀಡಲಾಗಿದೆ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಮಹೇಶ್ಸಿಂಗ್ ತಿಳಿಸಿದ್ದಾರೆ.