ಮುಂಬೈ: ತಮಿಳು ನಟ ಆರ್. ಮಾಧವನ್ಗೆ ಬಾಲಿವುಡ್ ಹೊಸದೇನಲ್ಲ. ಈ ಹಿಂದೆಯೂ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಆದರೆ, ‘ರಾಕೆಟ್ರಿ – ದಿ ನಂಬಿ ಎಫೆಕ್ಟ್’ ಚಿತ್ರದ ನಂತರ ಮಾಧವನ್ಗೆ ಬಾಲಿವುಡ್ನಲ್ಲಿ ಆಫರ್ಗಳು ಹೆಚ್ಚಾಗುತ್ತಿವೆ. ಮಾಧವನ್ಗೆ ಬಾಲಿವುಡ್ನಿಂದ ಹಲವು ಆಫರ್ಗಳಿದ್ದು, ಈ ಪೈಕಿ ಅವರು ಅಕ್ಷಯ್ ಕುಮಾರ್ ಅಭಿನಯದ ಹೊಸ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಆಗ ಚಾಕೊಲೇಟ್ ಬಾಯ್, ಈಗ ಆಂಗ್ರಿ ಯಂಗ್ ಮ್ಯಾನ್; ಮತ್ತೆ ಬಂದ ಪ್ರಜ್ವಲ್ ಸಹೋದರ …
ಬ್ರಿಟಿಷರ ವಿರುದ್ಧ ತೊಡೆ ತಟ್ಟಿದ ಸಿ. ಶಂಕರನ್ ನಾಯರ್ ಎಂಬ ಜನಪ್ರಿಯ ವಕೀಲರ ಕುರಿತು ಬಾಲಿವುಡ್ನಲ್ಲಿ ಬಯೋಪಿಕ್ ಆಗುತ್ತಿರುವ ಸುದ್ದಿ ಕೇಳಿರಬಹುದು. ಈ ಚಿತ್ರವನ್ನು ಕರಣ್ ಜೋಹರ್ ನಿರ್ಮಿಸುತ್ತಿದ್ದು, ಶಂಕರನ್ ನಾಯರ್ ಅವರ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ. ಈಗಾಗಲೇ ಕಳೆದ ವರ್ಷವೇ ಚಿತ್ರೀಕರಣ ಪ್ರಾರಂಭವಾಗಿದ್ದು, ಹಲವು ಮಹತ್ವದ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ.
ಈಗ ಈ ತಂಡಕ್ಕೆ ಆರ್. ಮಾಧವನ್ ಅವರ ಸೇರ್ಪಡೆಯಾಗಿದೆ. ಈ ಚಿತ್ರದಲ್ಲಿ ಮಾಧವನ್ ಸಹ ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರೀಕರಣದಲ್ಲೂ ಭಾಗವಹಿಸಿದ್ದಾರೆ. ಈ ಚಿತ್ರವನ್ನು ಜಲಯನ್ವಾಲಾ ಬಾಗ್ ಹತ್ಯಾಕಾಂಡದ ಕುರಿತು ಸುತ್ತಲಿದ್ದು, 20 ಮತ್ತು 30ರ ಕಾಲಘಟ್ಟದ ಚಿತ್ರವಾಗಿದೆ. ಈ ಹತ್ಯಾಕಾಂಡದ ವಿರುದ್ಧ ನ್ಯಾಯಾಲಯದಲ್ಲಿ ಶಂಕರನ್ ನಾಯರ್ ಅವರು ಹೋರಾಡಿ, ನ್ಯಾಯ ಕೊಡಿಸಿದ್ದರು. ಆ ಘಟನೆಯನ್ನಾಧರಿಸಿ, ರಘು ಪಲಟ್ ಮತ್ತು ಅವರ ಪತ್ನಿ ಪುಷ್ಪಾ ಪಲಟ್ ಬರೆದಿರುವ, ‘ದಿ ಕೇಸ್ ದಟ್ ಶುಕ್ ದಿ ಬ್ರಿಟಿಷ್ ಎಂಪೈರ್’ ಎಂಬ ಪುಸ್ತಕವನ್ನಾಧರಿಸಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ.
ಇದನ್ನೂ ಓದಿ: ‘ಕಡಲತೀರದ ಭಾರ್ಗವ’ ಚಿತ್ರದಿಂದ ಮಧುರವಾದ ಹಾಡು ಬಂತು …
ಸದ್ಯಕ್ಕೆ, ‘ಶಂಕರನ್ ನಾಯರ್ ಬಯೋಪಿಕ್” ಎಂದು ಕರೆಯಲ್ಪಡುತ್ತಿರುವ ಈ ಚಿತ್ರವನ್ನು ಕರಣ್ ಸಿಂಗ್ ತ್ಯಾಗಿ ನಿರ್ದೇಶನ ಮಾಡುತ್ತಿದ್ದು, ಅಕ್ಷಯ್ ಕುಮಾರ್, ಮಾಧವನ್ ಅಲ್ಲದೆ ಅನನ್ಯಾ ಪಾಂಡೆ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ದ್ವಿತೀಯ ಹಂತದ ಚಿತ್ರೀಕರಣ ಇದೀಗ ನಡೆಯುತ್ತಿದೆ. ಫೆಬ್ರವರಿ ಕೊನೆಯ ಹೊತ್ತಿಗೆ ಚಿತ್ರೀಕರಣ ಮುಗಿಯಲಿದೆ ಎಂದು ಹೇಳಲಾಗುತ್ತಿದೆ.
ಚಿರಂಜೀವಿ, ವಿಶಾಖಪಟ್ಟಣಂಗೆ ಶಿಫ್ಟ್ ಆಗುವುದಕ್ಕೆ ಯೋಚಿಸುತ್ತಿರುವುದು ಅದೇ ಕಾರಣಕ್ಕಾ?