ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಐಷಾರಾಮಿ ಕಾರುಗಳ ಕಳವು ಮತ್ತು ಕಾರುಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಿಸುವುದಾಗಿ ಮಾಲೀಕರನ್ನು ನಂಬಿಸಿ ಕಾರು ಪಡೆದು ಹಣ ನೀಡದೆ ವಂಚಿಸುತ್ತಿದ್ದ ಇಬ್ಬರು ಆರೋಪಿಗಳು ಕಬ್ಬನ್ಪಾರ್ಕ್ ಪೊಲೀಸರ ಬಂಧಿಸಿದ್ದಾರೆ.
ಕೆ.ಜಿ.ಹಳ್ಳಿ ನಿವಾಸಿ ಸೈಯದ್ ಜಿಬ್ರಾನ್(೨೮) ಮತ್ತು ತೆಲಂಗಾಣದ ಹೈದ್ರಾಬಾದ್ ನಗರದ ಪರ್ವತಮ್ ಹೇಮಚಂದ್ರ (೪೨) ಬಂಧಿತರು. ಇಬ್ಬರು ಆರೋಪಿಗಳಿಂದ ೮.೯೨ ಕೋಟಿ ರೂ. ಮೌಲ್ಯದ ಮರ್ಸಿಡಿಸ್ ಬೆಂಜ್, ರೇಂಜ್ ರೋವರ್, ಅಸ್ಟೀನ್ ಮಾರ್ಟಿನ್, ಮಹೀಂದ್ರ ತಾರ್, ಆಡಿ ಕ್ಯೂ-೭ ೆರ್ಡ್ ಎಂಡವರ್ ಸೇರಿ ವಿವಿಧ ಕಂಪನಿಯ ೧೨ ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಸೈಯದ್ ಜಿಬ್ರಾನ್, ಕಳೆದ ಐದಾರು ವರ್ಷಗಳಿಂದ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟಗಾರನಾಗಿದ್ದು, ಬೇರೆ ರಾಜ್ಯಗಳಲ್ಲಿಯೂ ಸಂಪರ್ಕ ಹೊಂದಿದ್ದಾನೆ. ಇತ್ತೀಚೆಗೆ
ತಮಿಳುನಾಡಿನ ಚೆನ್ನೈ ಮೂಲದ ರಾಜು ಎಂಬುವರಿಗೆ ಪ್ರವೀಣ್ ಎಂಬಾತನಿಂದ ಪರಿಚಯವಾಗಿದ್ದ ಆರೋಪಿ, ನಿಮ್ಮ ಬಳಿಯ ರೇಂಜ್ ರೋವರ್ ಕಾರು ಅನ್ನು ಉತ್ತಮ ಬೆಲೆಗೆ ಮಾರಾಟ ಮಾಡಿಸಿಕೊಡುವುದಾಗಿ ನಂಬಿಸಿದ್ದಾನೆ. ಅಲ್ಲದೆ, ಒಂದು ತಿಂಗಳ ಒಳಗೆ ಮಾರುವುದಾಗಿ ನಂಬಿಸಿ ಮುಂಗಡವಾಗಿ ೧೮ ಲಕ್ಷ ರೂ. ವರ್ಗಾವಣೆ ಮಾಡಿದ್ದ. ಹೀಗಾಗಿ ರಾಜು ಕಾರಿನ ಅಸಲಿ ದಾಖಲೆಗಳನ್ನು ನೀಡಿದ್ದರು. ಆದರೆ, ಆರೋಪಿ ಒಂದೂವರೆ ತಿಂಗಳಾದರೂ ಬಾಕಿ ಹಣ ನೀಡಿಲ್ಲ. ಜತೆಗೆ ಕಾರನ್ನು ಹಿಂದಿರಿಗಿಸಿಲ್ಲ. ಕರೆ ಮಾಡಿದರೂ ಪ್ರತಿಕ್ರಿಯೆ ನೀಡಿಲ್ಲ. ಈ ಮಧ್ಯೆ ಬೆಂಗಳೂರಿನ ಎಂ.ಜಿ.ರಸ್ತೆಗೆ ಬಂದು ಆರೋಪಿಯನ್ನು ಸಂಪರ್ಕಿಸಿ ಕಾರಿನ ಬಗ್ಗೆ ಪ್ರಶ್ನಿಸಿದಾಗ ಹಣವಾಗಲಿ ಅಥವಾ ಕಾರನಾಗಲಿ ಕೇಳಿದರೆ ನಿನಗೆ ಒಂದು ಗತಿ ಕಾಣಿಸುತ್ತೇನೆ ಎಂದು ಬೆದರಿಸಿದ್ದಾನೆ. ಈ ಸಂಬಂಧ ಕಾರಿನ ಮಾಲೀಕರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಹೀಗೆ ಐಷಾರಾಮಿ ಕಾರುಗಳ ಕಳ್ಳನಿಗೆ ರೇಂಜ್ ರೋವರ್ ಮುಳುವಾಗಿದೆ.
ಬೇರೆ ರಾಜ್ಯದ ಕಾರುಗಳೇ ಟಾರ್ಗೆಟ್:
ಬೇರೆ ರಾಜ್ಯಗಳಲ್ಲಿರುವ ಫೈನಾನ್ಸ್ ಕಂಪನಿಗಳು ಮತ್ತು ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ವ್ಯವಹಾರ ನಡೆಸುವ ವ್ಯಕ್ತಿಗಳ ಸಂಪರ್ಕ ಹೊಂದಿರುವ ಸೈಯದ್ ಜಿಬ್ರಾನ್, ಫೈನಾನ್ಸ್ ಕಂಪನಿ ಅಥವಾ ಫೈನಾನ್ಸಿಯರ್ಗಳು ಅಡಮಾನ ಇಟ್ಟುಕೊಂಡಿರುವ ಐಷಾರಾಮಿ ವಾಹನಗಳನ್ನೇ ಆರೋಪಿ ಟಾರ್ಗೆಟ್ ಮಾಡುತ್ತಿದ್ದ. ಅವುಗಳನ್ನು ಉತ್ತಮ ಬೆಲೆಗೆ ನಗರದಲ್ಲಿ ಮಾರಾಟ/ಬಾಡಿಗೆ ನೆಪದಲ್ಲಿ ಅಸಲಿ ದಾಖಲೆಗಳ ಜತೆ ಕಾರುಗಳನ್ನು ನಗರಕ್ಕೆ ತರುತ್ತಿದ್ದ. ನಂತರ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದ. ಖರೀದಿಸಿದ ವ್ಯಕ್ತಿಗೆ ಕೆಲ ದಿನಗಳ ಕಾಲ ಬಳಸಿ, ಕಾರು ಇಷ್ಟವಾಗದಿದ್ದಾಗ ಈತನೇ ಮಧ್ಯವರ್ತಿಯಾಗಿ ಬಂದು ಅದೇ ಕಾರನ್ನು ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡುತ್ತಿದ್ದ. ಇನ್ನು ಕೆಲವರಿಗೆ ದಾಖಲೆಗಳನ್ನು ಕೊಡದೆ, ನಕಲಿ ನಂಬರ್ ಪ್ಲೇಟ್ಗಳನ್ನು ಹಾಕಿಕೊಂಡು ಕಾರು ಚಲಾಯಿಸುವಂತೆ ಸಲಹೆ ನೀಡುತ್ತಿದ್ದ. ಅಂತಹ ಪ್ರಕರಣಗಳು ಪತ್ತೆಯಾಗಿವೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಜಾರ್ಖಂಡ್, ಛತ್ತೀಸ್ಘಢ ಸೇರಿ ವಿವಿಧ ರಾಜ್ಯಗಳ ಕಾರುಗಳ ಮಾಲೀಕರಿಗೆ ವಂಚಿಸಿದ್ದಾನೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವಿವರಿಸಿದ್ದಾರೆ.
ಕಳವು ಕಾರು ಖರೀದಿ ಆರೋಪಿ ಬಂಧನ:
ಮತ್ತೊಂದು ಪ್ರಕರಣದಲ್ಲಿ ಕಳವು ಮಾಡಿದ ಬೆಂಜ್ ಕಾರನ್ನು ಖರೀದಿಸಿದ ಪರ್ವತಮ್ ಹೇಮಚಂದ್ರ ಎಂಬಾತನನ್ನು ಬಂಧಿಸಲಾಗಿದೆ. ಸೈಯದ್ ಜಿಬ್ರಾನ್ ಸೂಚನೆ ಮೇರೆಗೆ ಕಿರಣ್ ಮತ್ತು ಮೊನಿಷ್ ಗಜೇಂದ್ರ ಎಂಬುವರು ಠಾಣೆ ವ್ಯಾಪ್ತಿಯ ಹೋಟೆಲ್ವೊಂದರ ಮುಂಭಾಗ ಬೆಂಜ್ ಕಾರನ್ನು ಕಳವು ಮಾಡಿದ್ದರು. ಈ ಕಾರನ್ನು ಆರೋಪಿಗಳು ಕಳವು ಮಾಲು ಎಂದೂ ಸೂಚಿಸಿದರೂ ಕಡಿಮೆ ಮೊತ್ತಕ್ಕೆ ಸಿಗುತ್ತದೆ ಎಂದು ಹೇಮಚಂದ್ರ ಕಾರು ಖರೀದಿಸಿದ್ದ. ಹೀಗಾಗಿ ಆತನನ್ನು ಬಂಧಿಸಲಾಗಿದೆ ಎಂದು ಹೇಳಿದರು.