ಬೆಂಗಳೂರು: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕು ಪಂಚಾಯಿತಿಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಾಯುಕ್ತರು ಸಾರ್ವಜನಿಕರ ಕುಂದು ಕೊರತೆ ಹಾಗೂ ಸಮಸ್ಯೆಗಳನ್ನು ಆಲಿಸಲು ಸಭೆ ಸೇರಿದ್ದರು. ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ತಾಲೂಕಿನ ಇಲಾಖಾ ವಾರು ಅಧಿಕಾರಿಗಳ ಸಭೆ ಹಾಗೂ ಸಾರ್ವಜನಿಕರ ಕುಂದು ಕೊರತೆಯನ್ನು ಆಲಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಜನರಿಗೆ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳು ಹೆಚ್ಚಾಗಿ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರ ಕೆಲಸವನ್ನು ಮಾಡಿಕೊಡಲು ಮೀನಾಮೀಷ ಮಾಡಿದರೆ, ಬಲಾಢ್ಯರ ಪರ ನಿಂತರೆ ಲೋಕಾಯುಕ್ತರ ಬಳಿ ಬನ್ನಿ ಎಂದು ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಎಸ್.ಪಿ ಶ್ರೀನಿವಾಸ ಜೋಷಿ ನಾಗರಿಕರಿಗೆ ಹೇಳಿದರು.
‘ವಯಸ್ಸಾದ ಹಿರಿಯ ನಾಗರಿಕರು ತಮ್ಮ ಸ್ವಂತ ಜಮೀನು ಉಳಿಸಿಕೊಳ್ಳಲು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ ಎನ್ನುವ ದೂರು ಹೆಚ್ಚಾಗಿ ಕೇಳಿ ಬಂದಿದೆ. ಅಧಿಕಾರಿಗಳಾದ ನಾವು ಜನರ ಸೇವೆಗೆ ಇರುವುದು ಎನ್ನುವುದನ್ನು ಮರೆತು ಕೆಲಸ ಮಾಡಿದರೆ ಇದಕ್ಕೆ ಉತ್ತರ ಸಿಗುತ್ತದೆ ಎನ್ನುವುದನ್ನು ಮರೆಯದಿರಿ’ ಎಂದು ಎಚ್ಚರಿಸಿದ್ದಾರೆ. ಒಂದು ದಾಖಲೆಯನ್ನು ಸರಿಪಡಿಸಿಲು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಅಲೆದಾಡಿಸುವ ಕೆಲಸ ಆಗಬಾರದು ಎಂದರು.
‘ಕೆಲವು ಇಲಾಖೆಯ ಅಧಿಕಾರಿಗಳಲ್ಲಿ ಇನ್ನೂ ಕೂಡ ನಿರ್ಲಕ್ಷತನ ಹೆಚ್ಚಾಗಿದೆ. ಲೋಕಾಯುಕ್ತರು ಆನೇಕಲ್ ವರೆಗೆ ಬಂದು ಸ್ಥಳೀಯರ ಸಮಸ್ಯೆಗಳನ್ನು ಆಲಿಸಲು ಇಲಾಖಾವಾರು ಅಧಿಕಾರಿಗಳನ್ನು ಸಭೆಗೆ ಕರೆಯಲಾಗಿದೆ ಆದರೆ ಅರಣ್ಯ ಇಲಾಖೆ ಬೆಸ್ಕಾಂ ಇಲಾಖೆ ಮತ್ತು ಅಬಕಾರಿ ಇಲಾಖೆಯವರು ಲೋಕೋಪಯೋಗಿ ಇಲಾಖೆಯವರು ದಿವ್ಯ ನಿರ್ಲಕ್ಷ ತೋರುತ್ತಿದ್ದಾರೆ ಅಂತಹ ಅಧಿಕಾರಿಗಳನ್ನು ಪಟ್ಟಿ ಮಾಡಿಕೊಳ್ಳಲಾಗಿದ್ದು ನೋಟಿಸ್ ಜಾರಿ ಮಾಡಲಾಗುವುದು’ ಎಂದು ಸಭೆಗೆ ಹಾಜೆರಾಗದವರ ಬಗ್ಗೆ ಕೈಗೊಂಡ ಕ್ರಮವನ್ನು ಹೇಳಿದರು.
30ಕ್ಕೂ ಹೆಚ್ಚು ಜನ ತಮ್ಮ ಸಮಸ್ಯೆಗಳನ್ನು ನೋಟಿಸ್ ಮೂಲಕ ಹಾಗೂ ಲಿಖಿತ ಪತ್ರದ ಮೂಲಕ ನಮಗೆ ನೀಡಿದ್ದಾರೆ. ಕೆಲವು ಇಲಾಖೆಯಲ್ಲಿನ ಸಮಸ್ಯೆಗಳು ಜಟಿಲವಾಗಿದ್ದು ಅವುಗಳನ್ನು ಮುಂದಿನ ದಿನಗಳಲ್ಲಿ ಲೋಕಾಯುಕ್ತ ಕಚೇರಿಗೆ ಸಂಬಂಧಪಟ್ಟ ಸಮಸ್ಯೆ ಇರುವವರನ್ನು ಕರೆಸಿಕೊಂಡು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಜನಸಾಮಾನ್ಯರು ಕಚೇರಿಗೆ ಹೋದಾಗ ಯಾವುದೇ ಕೆಲಸ ಆಗಿರಲಿ ಅಧಿಕಾರಿಗಳು ಅದಕ್ಕೆ ಸರಿಯಾದ ರೀತಿಯಲ್ಲಿ ಸ್ಪಂದಿಸುವ ಕೆಲಸ ಆಗಬೇಕು ಎಂದರು. ಇನ್ನು ಕೆಲವು ಕಚೇರಿಗಳಿಗೆ ಪತ್ರಕರ್ತರ ಹೆಸರಿನಲ್ಲಿ ನಕಲಿ ಪತ್ರಕರ್ತರು ಹೋಗಿ ನಾವು ಲೋಕಾಯುಕ್ತರಿಗೆ ದೂರು ನೀಡುತ್ತೇವೆ ಎಂದು ಸುಳ್ಳು ಹೇಳಿಕೊಂಡು ವಸೂಲಿಗೆ ಇಳಿದಿದ್ದು ಇಂತಹ ನಕಲಿ ಪತ್ರಕರ್ತರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಪತ್ರಕರ್ತರು ಒತ್ತಾಯಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಆನೇಕಲ್ ತಾಲೂಕಿನ ಕೆಲವು ಕಡೆ ಕೆರೆಗಳಲ್ಲಿ ಸರ್ಕಾರಿ ಕಚೇರಿಗಳನ್ನು ಕಟ್ಟಿಕೊಂಡಿದ್ದಾರೆ ಅಂತಹ ಕಡೆಗಳಲ್ಲಿ ಮಳೆ ಬಂದು ಕಚೇರಿಗಳಿಗೆ ನೀರು ನುಗ್ಗಿದೆ ಸರ್ಕಾರಿ ಜಾಗದಲ್ಲಿ ಕಚೇರಿಗಳಿದ್ದರೂ ಸಹ ನಿರ್ವಹಣೆ ಇಲ್ಲದೆ ಹಾಳಾಗುತ್ತಿದ್ದು ಇಂತಹ ಕಚೇರಿಗಳನ್ನು ಬಳಸಿಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದರು. ತಹಸಿಲ್ದಾರ್ ಶಿವಪ್ಪ ಲಮಾಣಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಣಾಧಿಕಾರಿ ಲಕ್ಷ್ಮೀನಾರಾಯಣ್, ಲೋಕಾಯುಕ್ತ ಡಿ.ವೈ.ಎಸ್.ಪಿಗಳಾದ ರೇಣಕಾ ಪ್ರಸಾದ್,ವೆಂಕಟೇಶ್ ಮತ್ತು ಇನ್ಪೆಕ್ಟರ್ ಗಳಾದ ಶ್ರೀನಿವಾಸ್,ಮಹೇಶ್ ಹಾಜರಿದ್ದರು.