ಬೆಂಗಳೂರು: ಕರೊನಾ ಸೋಂಕು ನಿವಾರಣೆಗಾಗಿ ದೇಶಾದ್ಯಂತ ಲಾಕ್ಡೌನ್ 2 ಚಾಲ್ತಿಯಲ್ಲಿದೆ. ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ರಾಜ್ಯ ಸರ್ಕಾರವೂ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದು, ಆ ಕ್ರಮಗಳ ಅನುಷ್ಠಾನ ಸುಲಭಗೊಳಿಸುವ ಸಲುವಾಗಿ ಕೆಲವೊಂದು ವಿವರಣೆಗಳುಳ್ಳ ಸುತ್ತೋಲೆಯನ್ನು ಶುಕ್ರವಾರ ಪ್ರಕಟಿಸಿದೆ. ಇದರ ಪ್ರಕಾರ, ಬಿಬಿಎಂಪಿ ಮತ್ತು ಇತರೆ ನಗರಗಳಲ್ಲಿ ಪ್ರಮಾಣಿತ ಲಾಕ್ಡೌನ್ ಕಾರ್ಯ ನಿರ್ವಹಣಾ ವಿಧಾನ ಹೇಗಿರಲಿದೆ ಎಂಬ ಅಂಶದತ್ತ ಬೆಳಕು ಚೆಲ್ಲಲಾಗಿದೆ.
ನಗರಗಳ ಪ್ರದೇಶಗಳಲ್ಲಿ ಕಾರ್ಯವಿಧಾನವನ್ನು ಐದು ರೀತಿಯಲ್ಲಿ ವರ್ಗೀಕರಣ ಮಾಡಿಕೊಂಡಿದ್ದು, ಬಿಕ್ಕಟ್ಟು ನಿರ್ವಹಣಾ ತಂಡದ ಘಟಕ ನಿಯಂತ್ರಕ, ಸಂಪೂರ್ಣ ಸೀಲ್ಡೌನ್ನಲ್ಲಿ ಪೊಲೀಸರ ಪಾತ್ರ ಏನು?, ಆರೋಗ್ಯ ಇಲಾಖೆ ಅಧಿಕಾರಿಗಳ ಹೊಣೆಗಾರಿಕೆಗಳು ಏನೇನು? ಬಿಬಿಎಂಪಿ, ನಗರಸಭೆ ಅಧಿಕಾರಿಗಳ ಜವಾಬ್ದಾರಿ ಏನು, ಅಗತ್ಯವಸ್ತುಗಳ ಪೂರೈಕೆ ನಿರ್ವಹಣೆ ಹೇಗೆ ಮಾಡಬೇಕು ಎಂಬುದರ ವಿವರಣೆ ಇದೆ.
ಬಿಕ್ಕಟ್ಟು ನಿರ್ವಹಣಾ ತಂಡದ ಘಟಕ ನಿಯಂತ್ರಕ: ಬಿಬಿಎಂಪಿ ಒಂದು ಪ್ರದೇಶವನ್ನು ನಿಯಂತ್ರಿತ ಪ್ರದೇಶ ಎಂದು ಒಮ್ಮೆ ಘೋಷಣೆ ಮಾಡಿದ ಬಳಿಕ, ಪ್ರತಿಯೊಂದು ವಲಯಕ್ಕೂ ಒಬ್ಬ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಅಥವಾ ಒಂದನೇ ದರ್ಜೆ ಅಧಿಕಾರಿಗೆ ದಂಡಾಧಿಕಾರಿಯ ಅಧಿಕಾರಗಳನ್ನು ನೀಡಿ ಅವರನ್ನು ಘಟಕ ನಿಯಂತ್ರಕ (ಕಮಾಂಡರ್) ನನ್ನಾಗಿ ಆಯುಕ್ತರು ನೇಮಕ ಮಾಡಬೇಕು. ಈ ಕಮಾಂಡರ್ ಬಫರ್ ವಲಯದ ಒಟ್ಟಾರೆ ನಿರ್ವಹಣೆಗೆ ಪೂರ್ಣ ಜವಾಬ್ದಾರನಾಗಿರುತ್ತಾನೆ. ಬಿಬಿಎಂಪಿ ಹೊರತುಪಡಿಸಿದ ಪ್ರದೇಶಗಳಲ್ಲಿ ಪ್ರತಿ ನಿಯಂತ್ರಿತ ವಲಯ, ಬಫರ್ ವಲಯಕ್ಕೆ ಜಿಲ್ಲಾಧಿಕಾರಿಯು ಘಟಕ ನಿಯಂತ್ರಕನನ್ನು ಮೇಲಿನ ಕ್ರಮದಂತೆ ನೇಮಕ ಮಾಡಬೇಕು. ನಿಯಂತ್ರಿತ ವಲಯಕ್ಕೆ ವಿನ್ಯಾಸಗೊಳಿಸಲಾದ ಎಸ್ಒಪಿ ವಲಯದಲ್ಲಿಯೂ ಜಾರಿಯಲ್ಲಿರುತ್ತದೆ.
ಬಿಬಿಎಂಪಿ ಪ್ರದೇಶದಲ್ಲಿನ ಘಟನಾ ಕಮಾಂಡರ್ ಬಿಬಿಎಂಪಿಯ ಹಿರಿಯ ಅಥವಾ ಕಿರಿಯ ಪ್ರಥಮ ದರ್ಜೆ ಅಧಿಕಾರಿ ಆಗಿರಬೇಕು. ಆತನನ್ನು ಈ ಉದ್ದೇಶಕ್ಕಾಗಿ ದಂಡಾಧಿಕಾರಿಯ ಅಧಿಕಾರವನ್ನು ನೀಡಿ ವಿಶೇಷವಾಗಿ ನೇಮಕ ಮಾಡಿರಬೇಕು. ಬಿಬಿಎಂಪಿಯೇತರ ಪ್ರದೇಶಗಳಲ್ಲಿ ಜಿಲ್ಲಾಧಿಕಾರಿಯು ಒಂದು ಅಥವಾ ಅದಕ್ಕಿಂತ ಹೆಚ್ಚಿನ ನಿಯಂತ್ರಿತ ವಲಯಕ್ಕೆ ತಾಲೂಕು/ಜಿಲ್ಲಾ ಮಟ್ಟದ ಅಧಿಕಾರಿಯನ್ನು ಘಟನಾ ಕಮಾಂಡರ್ ಆಗಿ ನೇಮಕ ಮಾಡಬಹುದು.
ನಿಯಂತ್ರಿತ ವಲಯದ ನಿರ್ವಹಣೆಗೆ ಸಂಬಂಧಿಸಿ ಬಿಬಿಎಂಪಿ ಆಯುಕ್ತರು/ಆಯಾ ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಗಡಿಗಳ ನಿಗದಿಯೂ ಸೇರಿ ಎಲ್ಲ ತೀರ್ಮಾನಗಳನ್ನು ಕೈಗೊಳ್ಳುವ ಹೊಣೆಗಾರಿಕೆ ಘಟನಾ ಕಮಾಂಡರ್ ಅವರದಾಗಿರುತ್ತದೆ. ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ ದಿನನಿತ್ಯದ ನಿರ್ವಹಣೆ ಘಟನಾ ಕಮಾಂಡರ್ನ ಹೊಣೆಗಾರಿಕೆಯಾಗಿರುತ್ತದೆ. ನಿಯಂತ್ರಿತ ವಲಯದ ಗಡಿಗಳನ್ನು ಸ್ಪಷ್ಟವಾಗಿ ಗುರುತಿಸಬೇಕು ಹಾಗೂ ಪ್ರವೇಶ ಮತ್ತು ನಿರ್ಗಮನ ಪಾಯಿಂಟ್ಗಳನ್ನು ಗುರುತಿಸಬೇಕು.
ನಿಯಂತ್ರಿತ ವಲಯದ ಕಣ್ಣಳತೆ ದೂರದಲ್ಲಿ ಘಟನಾ ಕಮಾಂಡ್ ಕೇಂದ್ರವನ್ನು ಸ್ಥಾಪಿಸಬೇಕು. ಘಟನಾ ಕಮಾಂಡರ್ ಅಲ್ಲಿಂದಲೇ ಕಾರ್ಯನಿರ್ವಹಿಸಬೇಕು. ಘಟನಾ ಕಮಾಂಡರ್ ಕೇಂದ್ರ ಕೇಂದ್ರೀಕೃತ ನಿಯಂತ್ರಣ ಕೊಠಡಿ ಹೊಂದಿದ್ದು, ಅದಕ್ಕೆ ನಿಯೋಜಿಸಲ್ಪಟ್ಟಿರುವ ಪೊಲೀಸ್, ನಗರಸಭೆ ಮತ್ತು ಆರೋಗ್ಯ ಪ್ರಾಧಿಕಾರಗಳ ಪ್ರತಿನಿಧಿಗಳ ನೆರವಿನೊಂದಿಗೆ ಘಟನಾ ಕಮಾಂಡರ್ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತದೆ. ದಿನದ 24 ಗಂಟೆಯೂ ಕೆಲಸ ಮಾಡುವ ಈ ಕೇಂದ್ರದಲ್ಲಿ ಸಿಬ್ಬಂದಿಗೆ ಅಗತ್ಯ ಮೂಲಸೌಕರ್ಯ ಇರಬೇಕು. ಇದನ್ನು ಒದಗಿಸುವ ಹೊಣೆಗಾರಿಕೆ ಬಿಬಿಎಂಪಿ/ನಗರಸಭೆಗಳದ್ದು.
ಕಂಟೇನ್ಮೆಂಟ್ ಝೋನ್ನಲ್ಲಿ ನಿಯಂತ್ರಣ ನಿಯಮ ಜಾರಿಗೆ ತರುವುದಕ್ಕಾಗಿ ವಿಶೇಷ ತಂಡಗಳನ್ನು ರಚಿಸಬೇಕು. ಕಮಾಂಡರ್ ನಿಯಂತ್ರಿತ ವಲಯದಲ್ಲಿ ಲಾಕ್ಡೌನ್ ಜಾರಿಗೊಳಿಸಲು ಸಂಚಾರಿ ತಂಡಗಳನ್ನು ಆಯಾ ವ್ಯಾಪ್ತಿಯಲ್ಲಿ ನಿಯೋಜಿಸಬೇಕು. ನಿಯಂತ್ರಿತ ವಲಯದಲ್ಲಿ ವಾಸಿಸುವ ಜನರ ವಿಶೇಷ ಅವಶ್ಯಕತೆಗಳನ್ನು (ಗರ್ಭಿಣಿ, ಹೃದ್ರೋಗಿಗಳು ಇತ್ಯಾದಿ) ಅಂದಾಜು ಮಾಡಿ ಅವರಿಗೆ ತುರ್ತು ಸಂದರ್ಭದಲ್ಲಿ ನೆರವು ಒದಗಿಸಬೇಕು. ಬಿಬಿಎಂಪಿ/ನಗರಸಭೆಗಳ ಆಯಾ ವಲಯದ ಚೀಫ್ ಆಫೀಸರ್ ಘಟನಾ ಕಮಾಂಡರ್ಗೆ ಕರ್ತವ್ಯ ನಿರ್ವಹಿಸಲು ನೆರವಾಗಬೇಕು.