ನವದೆಹಲಿ: ಕರೊನಾ ವಿರುದ್ಧ ಹೋರಾಟದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಮೊದಲಿನಿಂದಲೂ ವ್ಯಂಗ್ಯವಾಡುತ್ತ, ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಈಗ ಮತ್ತೊಮ್ಮೆ ಪ್ರಧಾನಿ ಮೋದಿ ವಿರುದ್ಧ, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ದೇಶವನ್ನು ವ್ಯಾಪಕವಾಗಿ ಸುತ್ತಿಕೊಳ್ಳುತ್ತಿರುವ ಕರೊನಾ ವೈರಸ್ ನಿಯಂತ್ರಣ ಮಾಡಲು ಕೇಂದ್ರ ಸರ್ಕಾರದ ಯೋಜನೆ ಏನು? ಈಗ ಲಾಕ್ಡೌನ್ ನಾಲ್ಕು ಹಂತಗಳು ಮುಗಿದರೂ ಕೊವಿಡ್-19 ಸೋಂಕು ಹರಡುವ ಪ್ರಮಾಣ ಇಳಿಮುಖವಾಗಿಲ್ಲ. ಲಾಕ್ಡೌನ್ನಿಂದ ದೇಶದಲ್ಲಿ ಕರೊನಾ ನಿಯಂತ್ರಣ ನಿಶ್ಚಿತವಾಗಿ ಸಾಧ್ಯವಾಗುತ್ತದೆ ಎಂದು ಪ್ರಧಾನಿ ಮೋದಿಯವರು ನಿರೀಕ್ಷೆ ಮಾಡಿದ್ದರು..ಆದರೆ ಈಗೇನಾಯಿತು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲ, ಕರೊನಾ ವೈರಸ್ ಪ್ರಸರಣ ಹೆಚ್ಚಾದ ಸಮಯದಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಿದ ಏಕೈಕ ದೇಶವೆಂದರೆ ಅದು ಭಾರತ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮಾಲ್ಗಳೂ ಓಪನ್ ಆಗ್ತಾವಾ? ಸಿಎಂ ಏನು ಹೇಳಿದರು?
ಎರಡು ತಿಂಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ಲಾಕ್ಡೌನ್ ಘೋಷಣೆ ಮಾಡಿದರು. ಇನ್ನು 21 ದಿನಗಳಲ್ಲಿ ಕರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ನಾವು ಜಯಗಳಿಸುತ್ತೇವೆ ಎಂದು ಆಗವರು ಹೇಳಿದ್ದರು. ಆದರೆ 60ಕ್ಕೂ ಹೆಚ್ಚು ದಿನಗಳಾದವು. ಏನಾಯಿತು? ಕೊವಿಡ್-19 ರೋಗಿಗಳ ಸಂಖ್ಯೆ ಹೆಚ್ಚಾಯಿತು ಬಿಟ್ಟರೆ ಬೇರೇನೂ ಫಲಿತಾಂಶ ಸಿಗಲಿಲ್ಲ. ಅಂದಮೇಲೆ ವೈರಸ್ ನಿಯಂತ್ರಣ ಲಾಕ್ಡೌನ್ನಿಂದ ಸಾಧ್ಯವಿಲ್ಲ ಎಂದಾಯಿತು. ಹಾಗಾದರೆ ಮುಂದೇನು? ನಾನು ಈ ಪ್ರಶ್ನೆಯನ್ನು ಕೇಂದ್ರ ಸರ್ಕಾರಕ್ಕೆ ಕೇಳುತ್ತಿದ್ದೇನೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿ ಕರೊನಾ ನಿಯಂತ್ರಣದೊಂದಿಗೆ ಆರ್ಥಿಕತೆ ಉತ್ತೇಜನ ಮಾಡಲು ಕೇಂದ್ರ ಸರ್ಕಾರದ ಕಾರ್ಯತಂತ್ರ ಏನು? ಈ ರೋಗ ಬಾರದಂತೆ ತಡೆಗಟ್ಟಲು ಯಾವ ಮುನ್ನೆಚ್ಚರಿಕಾ ಕ್ರಮಗಳನ್ನು ಮುಂದೆ ಕೈಗೊಳ್ಳಲಿದ್ದಾರೆ? ರಾಜ್ಯ ಸರ್ಕಾರಗಳು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೇಗೆ ಸಹಾಯ ಮಾಡಲಿದ್ದಾರೆ ಎಂದು ಕೂಡಲೇ ಕೇಂದ್ರ ಸರ್ಕಾರ ಹೇಳಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ 24ಗಂಟೆಯಲ್ಲಿ 101 ಹೊಸ ಕೊವಿಡ್-19 ಕೇಸ್ಗಳು; ಯಾವ ಜಿಲ್ಲೆಗಳಲ್ಲಿ ಎಷ್ಟು?
ಮಾರ್ಚ್ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ಲಾಕ್ಡೌನ್ ಘೋಷಣೆ ಮಾಡುವ ಸಂದರ್ಭದಲ್ಲಿ ಕರೊನಾ ಸೋಂಕಿತರ ಸಂಖ್ಯೆ 496 ಇತ್ತು. ಅದೀಗ 1.4 ಲಕ್ಷಕ್ಕೇರಿದೆ. ಹಾಗೇ ಮೃತರ ಸಂಖ್ಯೆ 4000ದ ಗಡಿ ದಾಟಿದೆ. (ಏಜೆನ್ಸೀಸ್)
‘ನಿರ್ಮಲಾ ಸೀತಾರಾಮನ್ ಇಚ್ಛಿಸಿದರೆ ನಾನೂ ಸಿದ್ಧ…’: ರಾಹುಲ್ ಗಾಂಧಿ ಸವಾಲ್