ನವದೆಹಲಿ: ಇತ್ತೀಚೆಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ನವದೆಹಲಿಯ ಮೇಲ್ಸೇತುವೆಯೊಂದರ ಬಳಿ ವಲಸೆ ಕಾರ್ಮಿಕರೊಂದಿಗೆ ಕುಳಿತು ಮಾತುಕತೆ ನಡೆಸಿ, ಅವರ ಕಷ್ಟಗಳನ್ನು ಆಲಿಸಿದ್ದರು.
ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲೇ ತೆರಳುತ್ತಿದ್ದ ವಲಸೆ ಕಾರ್ಮಿಕರೊಂದಿಗೆ ರಾಹುಲ್ ಗಾಂಧಿ ರಸ್ತೆ ಬದಿಯಲ್ಲಿ ಕುಳಿತು ಮಾತುಕತೆ ನಡೆಸಿ, ಅವರ ಅಹವಾಲು ಸ್ವೀಕರಿಸಿದ್ದ ಫೋಟೋಗಳೂ ವೈರಲ್ ಆಗಿದ್ದವು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ರಾಹುಲ್ ಗಾಂಧಿಯವರು ವಲಸೆ ಕಾರ್ಮಿಕರ ವಿಚಾರದಲ್ಲಿ ದೊಡ್ಡ ನಾಟಕ (ಡ್ರಾಮೆಬಾಜಿ) ಆಡುತ್ತಿದ್ದಾರೆ. ರಾಹುಲ್ ಗಾಂಧಿ ರಸ್ತೆ ಬದಿಯಲ್ಲಿ ಅವರೊಂದಿಗೆ ಕುಳಿತು ಪೋಸ್ ಕೊಡುವ ಬದಲು, ಕಾರ್ಮಿಕರ ಮಕ್ಕಳನ್ನು ಎತ್ತಿಕೊಂಡು, ಸೂಟ್ಕೇಸ್ ಹಿಡಿದುಕೊಂಡು ಅವರೊಂದಿಗೆ ಕಾಲ್ನಡಿಗೆಯಲ್ಲಿ ಸಾಗಬಹುದಿತ್ತು ಎಂದು ವ್ಯಂಗ್ಯವಾಡಿದ್ದರು.
ಇದನ್ನೂ ಓದಿ: ‘ರಾಹುಲ್ ಗಾಂಧಿ ವಲಸೆ ಕಾರ್ಮಿಕರ ಮಕ್ಕಳನ್ನು ಎತ್ತಿಕೊಂಡು, ಅವರೊಂದಿಗೆ ನಡೆದಿದ್ದರೆ ಚೆನ್ನಾಗಿತ್ತು…’
20 ಲಕ್ಷ ಕೋಟಿ ರೂಪಾಯಿಯ ಆತ್ಮ ನಿರ್ಭರ ಭಾರತ್ ಅಭಿಯಾನದ ವಿಶೇಷ ಪ್ಯಾಕೇಜ್ನ ನಾಲ್ಕನೇ ಚರಣದ ಘೋಷಣೆ ದಿನ ಹೀಗೆ ವಾಗ್ದಾಳಿ ನಡೆಸಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ಈಗ ರಾಹುಲ್ ಗಾಂಧಿ ಪ್ರತ್ಯುತ್ತರ ನೀಡಿದ್ದಾರೆ.
ಇಂದು ವಿಡಿಯೋ ಪ್ರೆಸ್ ಕಾನ್ಫರೆನ್ಸ್ ನಡೆಸಿದ ಅವರು, ನಿರ್ಮಲಾ ಸೀತಾರಾಮನ್ ಇಚ್ಛಿಸಿದರೆ ನಾನು ಖಂಡಿತ ಕಾಲ್ನಡಿಗೆಯಲ್ಲಿ ಉತ್ತರ ಪ್ರದೇಶಕ್ಕೆ ಹೋಗಲು ಸಿದ್ಧನಿದ್ದೇನೆ. ಅವರು ನನಗೆ ಮೊದಲು ಅನುಮತಿ ನೀಡದಲಿ ಎಂದು ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರ ಡ್ರಾಮೆಬಾಜಿ ಹೇಳಿಕೆ ವಿರುದ್ಧ ಈ ಹಿಂದೆಯೇ ಕಾಂಗ್ರೆಸ್ ನಾಯಕರು ತಿರುಗಿಬಿದ್ದಿದ್ದಾರೆ. ಸಾವಿರಾರು ಕಾರ್ಮಿಕರು ಹೀಗೆ ಕೆಲಸವಿಲ್ಲದೆ, ನಿರಾಶ್ರಿತರಾಗಿ ವಾಹನಗಳೂ ಇಲ್ಲದೆ ನೂರಾರು ಕಿಲೋಮೀಟರ್ ದೂರ ನಡೆದುಕೊಂಡೇ ಊರಿಗೆ ಹೋಗುತ್ತಿದ್ದಾರಲ್ಲ, ಅವರ ದುಸ್ಥಿತಿಗೂ ನಾಟಕ ಎಂದೇ ಹೆಸರು ನೀಡುತ್ತೀರಾ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಪ್ರಶ್ನಿಸಿದ್ದರು.
ಇದನ್ನೂ ಓದಿ: ಸಲೂನ್ಗಳು ತೆರೆದಿದ್ದರೂ ನೀವು ಹೋಗೋ ಮುನ್ನ ಇನ್ನೊಮ್ಮೆ ಯೋಚಿಸಿ…ಈ ಘಟನೆ ನಡೆದದ್ದು ಉಡುಪಿಯಲ್ಲಿ !
ರಾಹುಲ್ ಗಾಂಧಿಯವರು ವಲಸೆ ಕಾರ್ಮಿಕರ ಸಂಕಷ್ಟ ಆಲಿಸಿದ್ದನ್ನು ಡ್ರಾಮೆಬಾಜ್ ಎಂದು ಹೇಳುವ ಮೂಲಕ ನಿರ್ಮಲಾ ಸೀತಾರಾಮನ್ ಅವರು ಲಕ್ಷಾಂತರ ವಲಸೆ ಕಾರ್ಮಿಕರಿಗೆ, ಕೂಲಿ ಕಾರ್ಮಿಕರಿಗೆ ಅವಮಾನ ಮಾಡಿದ್ದಾರೆ. ಅವರನ್ನು ಈ ದೇಶವೆಂದೂ ಕ್ಷಮಿಸೋದಿಲ್ಲ ಎಂದು ಹೇಳಿದ್ದರು.
ಲಾಕ್ಡೌನ್ನಿಂದಾಗಿ ದೇಶದ ಬಡ ಜನರು, ಕೂಲಿಕಾರರು ಇಂದು ನಿರಾಶ್ರಿತರಾಗಿ, ಹೊಟ್ಟೆಗೂ ಇಲ್ಲದೆ ಪರಿತಪಿಸುತ್ತಿದ್ದಾರೆ. ಅವರ ಮೂಲಭೂತ ಮತ್ತು ಕಾನೂನು ಬದ್ಧ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಇದಕ್ಕೆ ಉತ್ತರ ನೀಡಬೇಕು. ಹಾಗೇ ಬಡಜನರ ಬಳಿ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಒತ್ತಾಯ ಮಾಡುತ್ತಿದೆ. (ಏಜೆನ್ಸೀಸ್)
ಇದನ್ನೂ ಓದಿ: ಶೂಟಿಂಗ್ ಶುರು ಮಾಡಿದ ಅಕ್ಷಯ್ ಕುಮಾರ್ …