ನವದೆಹಲಿ: ಕೇಂದ್ರ ಗೃಹ ಸಚಿವಾಲಯ ಇಂದು ಲಾಕ್ಡೌನ್ ಅವಧಿಯನ್ನು ಮೇ 31ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿ, ಹೊಸ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ. ಈ ಗೈಡ್ಲೈನ್ನಲ್ಲಿ ದೇಶಾದ್ಯಂತ ಕೆಲವು ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಅದನ್ನು ಹೊರತು ಪಡಿಸಿ ಉಳಿದೆಲ್ಲ ಚಟುವಟಿಕೆಗಳಿಗೆ ಲಾಕ್ಡೌನ್ 4.0ರಲ್ಲಿ ಅವಕಾಶ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೇಂದ್ರ ಸರ್ಕಾರ ಲಾಕ್ಡೌನ್ ನಿಯಮಗಳನ್ನು ಗಣನೀಯವಾಗಿ ಸಡಿಲ ಮಾಡಿದೆ. ಆದರೆ ಆ ಸಡಿಲಿಕೆಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ರಾಜ್ಯಗಳಿಗೇ ಬಿಟ್ಟಿದೆ. ತಮ್ಮ ರಾಜ್ಯದಲ್ಲಿ ಕರೊನಾ ಸ್ಥಿತಿಗತಿ ಹೇಗಿದೆ ಎಂಬುದನ್ನು ಅವಲೋಕನ ಮಾಡಿಕೊಂಡು, ಯಾವುದನ್ನು ನಿಷೇಧಿಸಬೇಕು? ಎಲ್ಲಿ ಸಡಿಲಿಕೆ ಮಾಡಬೇಕು ಎಂಬುದನ್ನು ಆಯಾ ಸರ್ಕಾರಗಳೇ ನಿರ್ಧರಿಸಿಕೊಳ್ಳಲಿವೆ.
ಇದನ್ನೂ ಓದಿ: ರಾಜ್ಯದಲ್ಲಿ ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಶೀಘ್ರವೇ ಆರಂಭ?
ಈ ಬಾರಿ ಲಾಕ್ಡೌನ್ ಮಾರ್ಗಸೂಚಿಯಲ್ಲಿ ಪ್ರಯಾಣಿಕರ ವಾಹನ, ಬಸ್ಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಯಾವುದೇ ಎರಡು ರಾಜ್ಯಗಳ ಮಧ್ಯೆ ವಾಹನ ಸಂಚಾರ ಮಾಡಬೇಕಾದರೆ, ಅದಕ್ಕೆ ಅವೆರಡೂ ರಾಜ್ಯಗಳ ಒಪ್ಪಿಗೆ ಬೇಕು.
ಹೀಗೆ ಷರತ್ತುಗಳೊಂದಿಗೆ ಸಡಿಲಿಕೆ ಕೊಟ್ಟ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯನ್ನು ದೆಹಲಿ ಸರ್ಕಾರ ಸ್ವಾಗತಿಸಿದೆ. ಕೊವಿಡ್-19ರ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಿದೆ.
ಈ ಬಗ್ಗೆ ದೆಹಲಿ ಸರ್ಕಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿ ಸರಿಯಾಗಿದೆ. ಆರ್ಥಿಕ ಚಟುವಟಿಕೆಗಳ ಮರು ಪ್ರಾರಂಭ ಮಾಡುವ ದಿಕ್ಕಿನಲ್ಲಿವೆ.
ನಾವು ಕರೊನಾದೊಂದಿಗೆ ಜೀವಿಸುವುದನ್ನು ಕಲಿಯಬೇಕು ಎಂಬುದನ್ನು ಆಗಿನಿಂದಲೇ ಹೇಳುತ್ತಿದ್ದೇವೆ. ಎರಡು ತಿಂಗಳ ಲಾಕ್ಡೌನ್ ಅವಧಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡು, ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿಕೊಳ್ಳುವ ಮೂಲಕ ಕರೊನಾದೊಂದಿಗೆ ಹೋರಾಡಲು ನಮ್ಮನ್ನು ನಾವು ಸಿದ್ಧ ಮಾಡಿಕೊಂಡಿದ್ದೇವೆ ಎಂದು ದೆಹಲಿ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಲಾಕ್ಡೌನ್ 4.0 ಮಾರ್ಗಸೂಚಿ ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕಾನೂನು ಕ್ರಮ
ಅಷ್ಟೇ ಅಲ್ಲ, ಆರ್ಥಿಕ ಚಟುವಟಿಕೆಗಳು ಶುರುವಾದ ಕರೊನಾ ಪ್ರಕರಣಗಳು ಹೆಚ್ಚಾಗಬಹದು. ಆದರೆ ನಾವೂ ಅದನ್ನು ಎದುರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದೆ.
ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಗೆ ಸಂಬಂಧಪಟ್ಟಂತೆ ಸಭೆ ನಡೆಸಿ, ವಿಸ್ತಾರವಾದ ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಸರ್ಕಾರ ಕಳಿಸಿದ್ದ ಹಲವು ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ಸೇರಿಸಿದೆ. ಇದೀಗ ಕೆಲವು ಚಟುವಟಿಕೆಗಳ ಮೇಲಿನ ನಿರ್ಬಂಧ ತೆರವು ಅನಿವಾರ್ಯ. ನಾವು ಕರೊನಾ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದೇವೆ ಎಂದವರು ತಿಳಿಸಿದ್ದಾರೆ. (ಏಜೆನ್ಸೀಸ್)
ಇದನ್ನೂ ಓದಿ: ದೇಶದಲ್ಲಿ ಮೇ 31ರವರೆಗೂ ಲಾಕ್ಡೌನ್…