ಚಿಕ್ಕಮಗಳೂರು: ವಿದೇಶದಿಂದ ಆಗಮಿಸುವವರ ಕ್ವಾರಂಟೈನ್ ಕೇಂದ್ರವನ್ನು ನಗರದ ಕೋಟೆ ಬಡಾವಣೆಯಲ್ಲಿ ತೆರೆಯಲು ಮುಂದಾಗಿರುವ ಜಿಲ್ಲಾಡಳಿತದ ನಿರ್ಧಾರಕ್ಕೆ ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತಪಡಿಸಿ ಸೋಮವಾರ ಲಾಡ್ಜ್ ಎದುರು ಪ್ರತಿಭಟನೆ ನಡೆಸಿದರು.
ಕೋಟೆ ಶ್ರೀ ವಿನಾಯಕ ದೇವಸ್ಥಾನ ಬಳಿಯ ಲಾಡ್ಜ್ನಲ್ಲಿ ಕ್ವಾರಂಟೈನ್ ಕೇಂದ್ರ ತೆರೆಯಲು ಜಿಲ್ಲಾಡಳಿತ ನಿರ್ಧರಿಸಿರುವ ವಿಚಾರ ತಿಳಿಯುತ್ತಿದ್ದಂತೆಯೇ ಸೋಮವಾರ ಬೆಳಗ್ಗೆ ಲಾಡ್ಜ್ ಬಳಿ ಸೇರಿದ ಸ್ಥಳೀಯರು ಇಲ್ಲಿ ಕ್ವಾರಂಟೈನ್ ಕೇಂದ್ರ ತೆರೆಯಬಾರದೆಂದು ಆಗ್ರಹಿಸಿದರು.
ಜನವಸತಿ ಪ್ರದೇಶದಲ್ಲೇ ಕ್ವಾರಂಟೈನ್ ಕೇಂದ್ರ ತೆರೆಯಲು ಮುಂದಾಗಿರುವುದು ಸೂಕ್ತವಲ್ಲ. ನಿಗಾದಲ್ಲಿರುವವರಲ್ಲಿ ಒಬ್ಬರಿಗೆ ಸೋಂಕು ಬಂದರೂ ಸಮುದಾಯಕ್ಕೆ ಹರಡುವ ಅಪಾಯವಿದೆ. ಹಾಗಾಗಿ ನಗರದ ಹೊರಗೆ ಕ್ವಾರಂಟೈನ್ ಕೇಂದ್ರ ತೆರೆಯಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಮತ್ತು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರನ್ನು ಭೇಟಿ ಮನವಿ ಸಲ್ಲಿಸಿದರು.
ನಗರಸಭೆ ಮಾಜಿ ಸದಸ್ಯೆ ಶ್ಯಾಮಲಾ ರಾವ್ ಮಾತನಾಡಿ, ಈ ಪ್ರದೇಶದಲ್ಲಿ ನಿವೃತ್ತರು ಹಾಗೂ ಹಿರಿಯ ನಾಗರಿಕರೇ ಹೆಚ್ಚಿದ್ದು, ಬಿ.ಪಿ., ಶುಗರ್ ಇರುವವರು ಇದ್ದಾರೆ. ಹೀಗಿದ್ದರೂ ಕ್ವಾರಂಟೈನ್ಗೆ ಒಪ್ಪಿಗೆ ನೀಡಿದ್ದೇಕೆ ಎಂದು ಲಾಡ್ಜ್ ಮಾಲೀಕರನ್ನು ಪ್ರಶ್ನಿಸಿದರು.
ಸ್ಥಳೀಯರಾದ ಶ್ರೀಧರಮೂರ್ತಿ, ರೇಣುಕಪ್ಪ, ಕೋಟೆ ಸೋಮಣ್ಣ, ರವೀಶ್ ಬಸಪ್ಪ, ದಿನೇಶ್ ಮತ್ತಿತರರು ಇದ್ದರು.