ಬಾಗಲಕೋಟೆ: ರಾಜ್ಯದ ಜಿಲ್ಲೆಯೊಂದರಲ್ಲಿ ನಾಲ್ಕು ದಿನಗಳ ಕಾಲ ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ರೈತರ ಪ್ರತಿಭಟನೆಯೊಂದು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಪರಿಣಾಮವಾಗಿ, ಮದ್ಯ ಖರೀದಿಗೆ ಮುಗಿಬಿದ್ದ ದೃಶ್ಯಗಳೂ ಕಂಡುಬಂದಿವೆ.
ಬಾಗಲಕೋಟೆ ಜಿಲ್ಲೆಯಾದ್ಯಂತ ನಾಲ್ಕು ದಿನಗಳ ಕಾಲ ಮದ್ಯ ಮಾರಾಟ ನಿಷೇಧಗೊಳಿಸಿ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಆದೇಶ ಹೊರಡಿಸಿದ್ದಾರೆ. ಕಬ್ಬು ಬೆಳೆಗೆ ಬೆಲೆ ನಿಗದಿ ವಿಚಾರವಾಗಿ ಮುಧೋಳದಲ್ಲಿ ತೀವ್ರಗೊಂಡಿರುವ ರೈತರ ಪ್ರತಿಭಟನೆ ಹಿನ್ನಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಇಂದು ಮಧ್ಯಾಹ್ನ 2 ಗಂಟೆಯಿಂದಲೇ ಅನ್ವಯಿಸುವಂತೆ ಮದ್ಯ ಮಾರಾಟ, ಸಾಗಾಣಿಕೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ನ. 19ರ ಮಧ್ಯರಾತ್ರಿ 12 ಗಂಟೆಯವರೆಗೂ ನಿಷೇಧ ಜಾರಿಯಲ್ಲಿ ಇರಲಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬು ಬೆಲೆ ನಿಗದಿಗಾಗಿ ನಡೆದ ಸಂಧಾನ ಸಭೆಗಳು ವಿಫಲಗೊಂಡಿದ್ದು, ರೈತರು ಇಂದು ಮುಧೋಳ ಬಂದ್ ಕೂಡ ನಡೆಸಿದ್ದರು. ಮುಧೋಳ ತಾಲೂಕಿನಲ್ಲಿ ವಿವಿಧೆಡೆ ಹೋರಾಟ ತೀವ್ರಗೊಂಡಿರುವುದರಿಂದ ಶಾಂತಿ-ಸುವ್ಯವಸ್ಥೆ ದೃಷ್ಟಿಯಿಂದ ಜಿಲ್ಲಾದ್ಯಂತ ಮದ್ಯ ಮಾರಾಟ, ಸಂಗ್ರಹಣೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಮತ್ತೊಂದೆಡೆ ಇಂದಿನಿಂದ ಜಾರಿಯಾಗುವಂತೆ ನ.19ರವರೆಗೂ ಮುಧೋಳ ತಾಲೂಕಿನಾದ್ಯಂತ 144 ನಿಷೇಧಾಜ್ಞೆ ಹೊರಡಿಸಲಾಗಿತ್ತು. ಬಳಿಕ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಇದೀಗ ಜಿಲ್ಲಾದ್ಯಂತ ಮದ್ಯ ಮಾರಾಟವನ್ನೂ ನಿಷೇಧ ಮಾಡಲಾಗಿದೆ.
ಒಂದೂವರೆ ವರ್ಷದ ಮಗನನ್ನೇ ಮಾರಿದ ತಾಯಿ; ನಾಲ್ಕೂವರೆ ವರ್ಷ ಹುಡುಕಾಡಿ ಪುತ್ರನನ್ನು ಪತ್ತೆ ಮಾಡಿ ಪಡೆದ ತಂದೆ!
ಶಾಲೆಗೆ ತೆರಳುವ ರಸ್ತೆ ದುರವಸ್ಥೆಗೆ ಬೇಸತ್ತು ವಿದ್ಯಾರ್ಥಿಗಳೇ ದುರಸ್ತಿ ಮಾಡಿದ್ರು; ಮಕ್ಕಳ ದಿನಾಚರಣೆಯಂದು ಶ್ರಮದಾನ