ಗೋಪಾಲಕೃಷ್ಣ ಪಾದೂರು ಉಡುಪಿ
ಕೋವಿಡ್ ಕಾರಣದಿಂದ ರಾಜ್ಯದ ಆಸ್ಪತ್ರೆಗಳಿಗೆ ಆಕ್ಸಿಜನ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಇದಕ್ಕೆ ಪರಿಹಾರೋಪಾಯವಾಗಿ ಜಿಲ್ಲಾಸ್ಪತ್ರೆಯಲ್ಲಿ 50 ಲಕ್ಷ ರೂ.ವೆಚ್ಚದಲ್ಲಿ ದ್ರವರೂಪದ ಆಮ್ಲಜನಕ ಘಟಕ ಪ್ರಾರಂಭಿಸಲಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ 124 ಆಕ್ಸಿಜನ್ ಬೆಡ್ಗಳಿವೆ. ಉಸಿರಾಟ ಸಮಸ್ಯೆ ಇರುವ ಕೋವಿಡ್ ರೋಗಿಗಳಿಂದ ಹೆಚ್ಚಿನ ಬೆಡ್ಗಳು ಭರ್ತಿಯಾಗಿವೆ. ಜಿಲ್ಲಾ ಆರೋಗ್ಯ ಇಲಾಖೆ ನಿಧಿಯಿಂದ ಲಿಕ್ವಿಡ್ ಆಕ್ಸಿಜನ್ ಟ್ಯಾಂಕ್ ನಿರ್ಮಿಸಲಾಗುತ್ತಿದ್ದು, ಮುಂದಿನ ವಾರ ಕಾರ್ಯಾರಂಭ ಮಾಡಲಿದೆ. ಇದರಲ್ಲಿ 6,000 ಲೀಟರ್ಸ್ ದ್ರವರೂಪದ ಆಮ್ಲಜನಕವನ್ನು ಸಂಗ್ರಹಿಸಬಹುದು. ಇದು 1,250 ಸಿಲಿಂಡರ್ಗಳಿಗೆ ಸಮನಾಗಿದ್ದು, ಟ್ಯಾಂಕರ್ ಮೂಲಕ ತಂದು ಆಕ್ಸಿಜನ್ಗಳನ್ನು ತುಂಬಿಸಲಾಗುತ್ತದೆ. ನಂತರ ಆಮ್ಲಜನಕವನ್ನು ಪೈಪ್ ಮೂಲಕ ರೋಗಿಗಳಿಗೆ ಪೂರೈಸಲಾಗುತ್ತದೆ.
ಸಾರಿ ಪ್ರಕರಣ ಹೆಚ್ಚಳ: ಕರೊನಾದಿಂದ ಉಸಿರಾಟ ಸಮಸ್ಯೆ ಹೆಚ್ಚುತ್ತಿದ್ದು, ರಕ್ತದಲ್ಲಿ ಆಮ್ಲಜನಕದ ಕೊರತೆ ಉಂಟಾಗಿ ಅಪಾಯದ ಪರಿಸ್ಥಿತಿ ಉಂಟಾಗುತ್ತಿದೆ. ಇಂಥ ರೋಗಿಗಳಿಗೆ ನಿರಂತರ ಆಮ್ಲಜನಕ ಪೂರೈಸಬೇಕು. ಆಸ್ಪತ್ರೆಯಲ್ಲಿ 50 ಬೆಡ್ಗಳ ಐಸೋಲೇಶನ್ ವಾರ್ಡ್ನಲ್ಲಿ ನಿತ್ಯ ಹತ್ತಾರು ಸಾರಿ (ಉಸಿರಾಟ) ಪ್ರಕರಣ ಹೊಂದಿರುವ ರೋಗಿಗಳು ದಾಖಲಾಗುತ್ತಿದ್ದಾರೆ.
ಆಕ್ಸಿಜನ್ ಬೇಡಿಕೆ ಏರಿಕೆ !: ಹಿಂದೆ ದಿನನಿತ್ಯ ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್ ಪೂರೈಸುವ ವ್ಯವಸ್ಥೆ ಇತ್ತು. ಇದೀಗ ಕರೊನಾ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಆಮ್ಲಜನಕದ ಬೇಡಿಕೆ ಮೂರು ಪಟ್ಟು ಏರಿಕೆಯಾಗಿದೆ. ಹೆಚ್ಚುವರಿ ಸಿಲಿಂಡರ್ಗಳು ಸಕಾಲದಲ್ಲಿ ಪೂರೈಕೆಯಾಗದೆ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ದ್ರವ ಆಮ್ಲಜನಕ ಟ್ಯಾಂಕ್ನಿಂದ ಈ ಕೊರತೆ ನೀಗಲಿದೆ. ಆಮ್ಲಜನಕ ಪೂರೈಕೆಯೂ ಸರಾಗವಾಗಲಿದೆ.
ಕೋವಿಡ್ನಿಂದಾಗಿ ಆಕ್ಸಿಜನ್ ಬೆಡ್ಗಳ ಅಗತ್ಯ ಹೆಚ್ಚಾಗಿದೆ. ಆದರೆ ಆಮ್ಲಜನಕ ಸಿಲಿಂಡರ್ ಪೂರೈಕೆ ಬೇಡಿಕೆಯಷ್ಟು ಸಿಗುತ್ತಿಲ್ಲ. ಹೀಗಾಗಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ನಿರ್ಮಿಸಲಾಗಿದೆ. ಘಟಕ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಲೈಸೆನ್ಸ್ ಬಂದ ತಕ್ಷಣ ಕಾರ್ಯನಿರ್ವಹಿಸಲಿದೆ.
-ಡಾ.ಮಧುಸೂದನ್ ನಾಯಕ್, ಜಿಲ್ಲಾ ಸರ್ಜನ್, ಜಿಲ್ಲಾಸ್ಪತ್ರೆ ಅಜ್ಜರಕಾಡು