ಲಿಂಗಸುಗೂರು: ಪಟ್ಟಣ ಮತ್ತು ತಾಲೂಕಿನ ಗ್ರಾಮೀಣ ಭಾಗದಲ್ಲಿ ಗುರುವಾರ ಸಂಜೆ ಬಿರುಗಾಳಿ ಸಹಿತ ಅಕಾಲಿಕ ಮಳೆಯಿಂದ ಪಪ್ಪಾಯ ಬೆಳೆ ಹಾನಿಗೀಡಾಗಿದ್ದು, ಲಕ್ಷಾಂತರ ರೂ. ಖರ್ಚು ಮಾಡಿದ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಯಲಗಲದಿನ್ನಿ ಗ್ರಾಮದ ಬಸವರಾಜ ಗಿರೆಪ್ಪನವರ್ ಎಂಬ ರೈತ ತನ್ನ 9 ಎಕರೆ ಜಮೀನಿನಲ್ಲಿ ಕಳೆದ ಒಂಬತ್ತು ತಿಂಗಳ ಹಿಂದೆ 5 ಸಾವಿರ ಪಪ್ಪಾಯ ಗಿಡಗಳನ್ನು ಬೆಳೆದಿದ್ದರು. ಪ್ರಸಕ್ತ ವರ್ಷ ಪಪ್ಪಾಯ ಹಣ್ಣು ಪ್ರತಿ ಕೇಜಿಗೆ 15 ರಿಂದ 20 ರೂ. ವರೆಗೆ ಮಾರುಕಟ್ಟೆಯಲ್ಲಿ ಬೆಲೆ ಇದೆ. ಇನ್ನೆರಡು ದಿನದಲ್ಲಿ ಖರೀದಿದಾರರು ಬರುವಷ್ಟರಲ್ಲಿ ಅಕಾಲಿಕ ಗಾಳಿ ಮಳೆಗೆ 2 ಸಾವಿರಕ್ಕೂ ಹೆಚ್ಚು ಗಿಡಗಳು ಹಾನಿಗೀಡಾಗಿ, ಪಪ್ಪಾಯ ಕಾಯಿಗಳು ನೆಲಕ್ಕುರುಳಿವೆ.