ಲಿಂಗಸುಗೂರು: ದೇಶದಲ್ಲಿ ದಿನದಿಂದ ದಿನಕ್ಕೆ ನಿರುದ್ಯೋಗಿಗಳ ಪ್ರಮಾಣ ಹೆಚ್ಚುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಉದ್ಯೋಗ ಸೃಷ್ಟಿಸಿ ಸ್ಥಳೀಯರಿಗೆ ಆದ್ಯತೆ ನೀಡುವ ಮೂಲಕ ನಿರುದ್ಯೋಗ ಸಮಸ್ಯೆ ದೂರವಾಗಿಸಬೇಕೆಂದು ಆಗ್ರಹಿಸಿ ಡಿವೈಎಫ್ಐ ಮತ್ತು ಎಸ್ಎಫ್ಐ ಸಂಘಟನೆ ಮುಖಂಡರು ಶನಿವಾರ ಪ್ರತಿಭಟನೆ ನಡೆಸಿದರು.
ಪ್ರತಿ ವರ್ಷ ಲಕ್ಷಾಂತರ ಪದವೀಧರರು ಉದ್ಯೋಗಾಕಾಂಕ್ಷಿಗಳಾಗಿ ಹೊರ ಬರುತ್ತಿದ್ದು, ಅವರ ಪದವಿಗೆ ತಕ್ಕ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಇರುವ ಉದ್ಯೋಗಗಳೂ ದಾಖಲೆ ಸಂಖ್ಯೆಯಲ್ಲಿ ನಾಶ ಹೊಂದುತ್ತಿವೆ. ಬ್ಯಾಂಕ್ಗಳ ವಿಲೀನ, ಸಾರ್ವಜನಿಕ ರಂಗದ ಉದ್ಯಮಗಳ ಮಾರಾಟ, ಬಂಡವಾಳ ಹಿಂತೆಗೆತ, ಸರ್ಕಾರಿ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿ ಮಾಡದಿರುವುದು, ಹೊರಗುತ್ತಿಗೆ ಪದ್ಧತಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ಸೇರಿ ಸರ್ಕಾರದ ನೀತಿಗಳಿಂದ ನಿರುದ್ಯೋಗ ಸಮಸ್ಯೆ ಎದುರಾಗಿದೆ.
ಸರ್ಕಾರ ಆಯಾ ಜಿಲ್ಲೆಗಳ ಕೃಷಿ, ವಾಣಿಜ್ಯ ಬೆಳೆಗಳು, ಪ್ರಾಕೃತಿಕ ಸಂಪತ್ತು, ಸಂಪನ್ಮೂಲಗಳಿಗೆ ತಕ್ಕಂತೆ ಉದ್ಯೋಗ ಸೃಷ್ಟಿಸಬಲ್ಲ ಕೈಗಾರಿಕೆ, ಉದ್ಯಮಗಳನ್ನು ಸ್ಥಾಪಿಸಿ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಅದಕ್ಕಾಗಿ ಸರೋಜಿನಿ ಮಹಿಷಿ ವರದಿ ಪರಿಷ್ಕರಿಸಿ ಕಾಯ್ದೆ ರೂಪಿಸಬೇಕೆಂದು ಒತ್ತಾಯಿಸಿದರು.