ಕೆ.ಆರ್.ಪೇಟೆ: ತಾಲೂಕಿನ ವರಾಹನಾಥ ಕಲ್ಲಹಳ್ಳಿಯಲ್ಲಿರುವ ಸುಪ್ರಸಿದ್ದ ಭೂ ವರಾಹನಾಥ ಸ್ವಾಮಿ ದೇವಾಲಯವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿಸುವಂತೆ ಗ್ರಾಮಸ್ಥರು ದೇವಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಗಂಜಿಗೆರೆ ಗ್ರಾಪಂ ಮಾಜಿ ಸದಸ್ಯ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ದೇವಾಲಯದ ಆಡಳಿತ ಮಂಡಳಿ
ವಿರುದ್ಧ ಘೋಷಣೆ ಕೂಗಿದರು.
ನಂತರ ಮಾತನಾಡಿದ ಕುಮಾರ್, ಸುತ್ತಲ ಹಳ್ಳಿಗಳಿಂದ ಚಂದಾ ವಸೂಲಿ ಮಾಡಿ ಪ್ರತಿ ವರ್ಷ ಭೂ ವರಾಹನಾಥ ಜಯಂತಿ ಆಚರಿಸಿಕೊಂಡು ಬರಲಾಗುತ್ತಿತ್ತು. ಕಳೆದ 11 ವರ್ಷಗಳ ಹಿಂದೆ ದೇವಾಲಯ ಜೀರ್ಣೋದ್ಧಾರ ಹೆಸರಿನಲ್ಲಿ ಪರಕಾಲ ಮಠ ಪ್ರವೇಶ ಮಾಡಿತು. ಆರಂಭದಲ್ಲಿ ದೇವಾಲಯ ಅಭಿವೃದ್ಧಿಗೆ ಸ್ಥಳೀಯ ಸಮಿತಿ ರಚಿಸಲಾಗಿತ್ತು. ಈಗ ದೇಗುಲ ಪ್ರಸಿದ್ಧಿಯಾಗಿದೆ. ಕೋಟ್ಯಂತರ ರೂ. ದೇಣಿಗೆ ಹರಿದು ಬರುತ್ತಿದೆ. ಈ ಸಂದರ್ಭ ದೇವಾಲಯ ಅಭಿವೃದ್ಧಿ ಸಮಿತಿಯಿಂದ ಸ್ಥಳೀಯರನ್ನು ಕೈಬಿಟ್ಟು, ಕೆಲವೇ ವ್ಯಕ್ತಿಗಳನ್ನು ಮುಂದಿಟ್ಟುಕೊಂಡು ಟ್ರಸ್ಟ್ ರಚನೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಗ್ರಾಮಸ್ಥರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ದೇವಾಲಯ ಆಡಳಿತ ಸಮಿತಿ ವಿಸರ್ಜಿಸಿ, ಮುಜರಾಯಿ ವ್ಯಾಪ್ತಿಗೆ ಒಳಪಡಿಸಬೇಕು. ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.
ಮುಖಂಡರಾದ ಯಜಮಾನ್ ಶಿವನಾಯಕ್, ಮಂಜುನಾಥ, ರೇವಣ್ಣ, ಸುರೇಶ್, ಶಂಕರ, ಮಾದೇಶ, ಚನ್ನಮ್ಮ, ಲಕ್ಷ್ಮಮ್ಮ, ಸಾಕಮ್ಮ ನೇತೃತ್ವ ವಹಿಸಿದ್ದರು.