ಎಚ್.ಡಿ.ಕೋಟೆ: ಸಮುದಾಯದ ಏಳಿಗೆಗಾಗಿ ನಾನು ನಿಸ್ವಾರ್ಥ ಸೇವೆ ಮಾಡಿದೆ. ಅದನ್ನು ಗುರುತಿಸಿ ಸರ್ಕಾರ ಗೌರವಿಸಿದೆ. ಅದೇ ರೀತಿ ನನ್ನ ಮೂಲಕ ನನ್ನ ಸಮುದಾಯದ ಸಮಸ್ಯೆಗಳನ್ನು ಗುರುತಿಸಿ ಬಗೆಹರಿಸುವ ಕೆಲಸ ಆಗಬೇಕು ಎಂದು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಮೊತ್ತ ಸೋಮಣ್ಣ ಹೇಳಿದರು.
ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ವಿಚಾರ ತಿಳಿದು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಂದ ಶುಕ್ರವಾರ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಪದ್ಮಶ್ರೀ ಪ್ರಶಸ್ತಿ ಬರುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಜತೆಗೆ ಆಸೆಯನ್ನು ಕೂಡ ಇಟ್ಟುಕೊಂಡಿರಲಿಲ್ಲ. ಕೇಂದ್ರ ಸರ್ಕಾರ ಕಟ್ಟಕಡೆಯ ವ್ಯಕ್ತಿಯನ್ನು ಈ ಎತ್ತರಕ್ಕೆ ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಈ ಸಮುದಾಯಕ್ಕೆ ಸಂದ ಗೌರವ. ಹಾಗಾಗಿ ಸರ್ಕಾರಕ್ಕೆ ಗೌರವ ಸಲ್ಲಿಸುತ್ತೇನೆ ಎಂದರು.
ನನ್ನನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದಾರೆ ಎಂಬ ಖುಷಿ. ಇನ್ನೊಂದು ಕಡೆ ಎಷ್ಟೇ ಹೋರಾಟ ಮಾಡಿಕೊಂಡು ಬಂದರೂ ಇನ್ನೂ ನಮ್ಮ ಸಮುದಾಯದ ಸಮಸ್ಯೆಗಳು ಬಗೆಹರಿದಿಲ್ಲ ಎಂಬ ನೋವು ಇದೆ. ಅದು ಬಗೆಹರಿಸದರೆ ಪ್ರಶಸ್ತಿ ಕೊಟ್ಟಷ್ಟೇ ಖುಷಿ ಆಗುತ್ತದೆ ಎಂದರು.
ಅರಣ್ಯ ಕಾಯ್ದೆ ಅನುಷ್ಠಾನಕ್ಕೆ ಬಂದು 15 ವರ್ಷ ಕಳೆದರೂ ಅದು ಇನ್ನೂ ಜಾರಿಗೆ ಬಂದಿಲ್ಲ. ಅದು ಸಮರ್ಪಕವಾಗಿ ಜಾರಿಗೆ ಬರಬೇಕು. ಪ್ರಜಾಪ್ರಭುತ್ವದಲ್ಲಿ ನಮ್ಮ ಆದಿವಾಸಿಗಳಿಗೆ ಪ್ರಾತಿನಿಧ್ಯ ಸಿಗಬೇಕು, ಆದಿವಾಸಿಗಳು ಸಮಗ್ರವಾಗಿ ಭೂಮಿಯ ಒಡೆಯರಾಗಬೇಕು. ಹೈಕೋರ್ಟ್ ಆದೇಶ ಆಗಿದ್ದು, ಅದು ಅನುಷ್ಠಾನಕ್ಕೆ ಬರಬೇಕು ಎಂದರು.
ಆದಿವಾಸಿ ಮಕ್ಕಳಿಗೆ ಉತ್ತಮವಾದ ಗುಣಮಟ್ಟದ ಶಿಕ್ಷಣ ಲಭಿಸಿ ಅವರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಆದಿವಾಸಿಗಳ ಮುಖದಲ್ಲಿ ಸ್ವಚ್ಛಂದವಾದ ನಗು ಬಂದರೆ ನನಗೆ ಪ್ರಶಸ್ತಿ ಸಿಕ್ಕಿದಕ್ಕಿಂತ ಹೆಚ್ಚು ಖುಷಿ ಆಗುತ್ತದೆ ಎಂದರು.
ಇದುವರೆಗೂ ಆದಿವಾಸಿಗಳು ವಾಸ ಮಾಡುವ ಗ್ರಾಮಗಳು ಕಂದಾಯ ಗ್ರಾಮಗಳಾಗಿಲ್ಲ. ಕುಳಿತಿರುವ ಜಾಗಕ್ಕೆ ಹಕ್ಕುಗಳಿಲ್ಲ. ಸರ್ಕಾರ ಈಗ ನನ್ನನ್ನು ಹೇಗೆ ಗುರುತಿಸಿದೆಯೋ ಅದೇ ರೀತಿ ನಮ್ಮ ಸಮುದಾಯದ ಸಮಸ್ಯೆಗಳನ್ನು ಗುರುತಿಸಿ ಸಮರ್ಪಕವಾಗಿ ಬಗೆ ಹರಿಸಬೇಕು. ಈ ಸಮಸ್ಯೆಗಳನ್ನು ಬಗೆಹರಿಸಿದಾಗ ಪದ್ಮಶ್ರೀ ಪ್ರಶಸ್ತಿಗೆ ಗೌರವ ಬರುತ್ತದೆ ಎಂದರು.
ಅದೇ ರೀತಿ ನಮ್ಮ ಸಮುದಾಯದ ನಾಯಕರು ಕೂಡ ಆ ಪಂಗಡ ಈ ಪಂಗಡ ಎಂದು ಹೋಳಾಗಿ ಹೋಗದೆ ಸಮುದಾಯದ ಒಳಿತಿಗಾಗಿ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು. ಸಮುದಾಯದ ವಿಚಾರವಾಗಿ ದುಡಿಯಬೇಕು. ನನಗೆ ಸಿಕ್ಕಿದ ಈ ಗೌರವ ನಿಮಗೂ ಸಿಗಬೇಕು ಎಂಬುದು ನನ್ನ ಅಭಿಲಾಷೆ ಎಂದು ತಿಳಿಸಿದರು.