ಶಿಗ್ಗಾಂವಿ: ಇಂದಿನ ಮುಂದುವರಿದ ಶೈಕ್ಷಣಿಕ ಯುಗದಲ್ಲಿ ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳಿಗೂ ಹೊಸ ಪರಿಕಲ್ಪನೆಯ ಅವಶ್ಯವಿದೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಿ ಬಡ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಬೇಕು ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 2ರಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪಾಲಕರ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸುಸಂಸ್ಕೃತ ಸಮಾಜ ನಿರ್ವಣವಾಗಬೇಕಾದರೆ ಇಂದಿನ ಮಕ್ಕಳಿಗೆ ಉತ್ತಮ ಮಾರ್ಗದರ್ಶನದ ಅವಶ್ಯಕತೆ ಬಹಳಷ್ಟಿದೆ. ಹಣವಂತರು ಸಮಾಜಕ್ಕೆ ಏನಾದರೂ ಕೊಡುಗೆ ಕೊಡುವಂತವರಾದಾಗ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದರು.
ಭಾರತ ಸೇವಾ ಸಂಸ್ಥೆ ವತಿಯಿಂದ ಶಾಲೆಗೆ 10 ಟೇಬಲ್ ಹಾಗೂ ಮಕ್ಕಳ 50 ಖುರ್ಚಿಗಳನ್ನು ವಿತರಿಸಿದಲ್ಲದೆ, ಶಾಲೆ ಹೆಸರಲ್ಲಿ ಠೇವಣಿಗೆಂದ 50 ಸಾವಿರ ರೂ.ಗಳನ್ನು ಇಟ್ಟು ಅದರಿಂದ ಬರುವ ಬಡ್ಡಿ ಹಣದಲ್ಲಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು.
ಪುರಸಭೆ ಸದಸ್ಯ ಸುಭಾಸ ಚೌಹಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಲೆಗಳಿಗೆ ಹೆಚ್ಚಿನ ಸೌಲಭ್ಯ ನೀಡಿ ಬಡ ಮಕ್ಕಳ ಪ್ರಗತಿಗೆ ಸರ್ಕಾರ ಶ್ರಮಿಸಬೇಕು ಎಂದರು.
ಶಿಕ್ಷಕಿ ಸುಮಾ ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಡಿಎಂಸಿ ಅದ್ಯಕ್ಷ ನಾಗರಾಜ ಬಡಿಗೇರ, ಅಂಜುಮನ್ ಸಂಸ್ಥೆಯ ಮುಖಂಡ ಮಜೀದ್ ಮಾಳಗಿಮನಿ, ಚಂದ್ರು ಹೆಬ್ಬಾಳ, ಬಸವಂತಪ್ಪ ಬೈಲವಾಳ, ಶೀಲಾ ಅಂಬೂರ, ಶಿವರಾಜ ಪಾಣಿಗಟ್ಟಿ, ಶ್ರೀಕಾಂತ ಶಿವಲೋಚನಮಠ, ಮುಖ್ಯ ಶಿಕ್ಷಕಿ ಆರ್.ಎಸ್. ಕೊಪ್ಪದ, ಇತರರಿದ್ದರು.