ಹಟ್ಟಿಚಿನ್ನದಗಣಿ: ಮಾನ್ವಿ ತಾಲೂಕಿನ ಮದ್ಲಾಪುರದಲ್ಲಿ ಮಾದಿಗ ಸಮುದಾಯದ ಪ್ರಸಾದ್ ಎಂಬುವವರನ್ನು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ಕೊಲೆಗೀಡಾದ ಪ್ರಸಾದ್ ಕುಟುಂಬಕ್ಕೆ ನ್ಯಾಯಯುತವಾದ ಪರಿಹಾರ ಒದಗಿಸಬೇಕೆಂದು ಮಾದಿಗ ಜಾಗೃತಿ ಸೇನೆಯ ಅಧ್ಯಕ್ಷ ವಿಜಯಕುಮಾರ್ ಆಗ್ರಹಿಸಿದರು.
ಇದನ್ನೂ ಓದಿ: ಮಾದಿಗ ಸಮುದಾಯದ ಆಶೀರ್ವಾದ ನನ್ನ ಮೇಲಿದೆ
ಪ್ರಸಾದ್ ಹತ್ಯೆ ಖಂಡಿಸಿ ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಯುವಕ ಮಂಡಳಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಗುರುವಾರ ಮಾತನಾಡಿದರು. ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ದಲಿತರ ಕೇರಿಗಳಲ್ಲಿ ಕುಂದುಕೊರತೆ ಸಭೆ ನಡೆಸುತ್ತಿಲ್ಲ ಎಂದು ದೂರಿದರು.
ಜಿಲ್ಲೆಯಲ್ಲಿ ಒಂದಿಲ್ಲೊಂದು ಕಾರಣಕ್ಕೆ ದಲಿತರ ಮೇಲೆ ನಿರಂತರ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿದ್ದು, ನಿಯಂತ್ರಿಸಲು ಕ್ರಮಕೈಗೊಳ್ಳಬೇಕು. ಮೃತ ಪ್ರಸಾದ್ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಬೇಕು. ಕುಟುಂಬಕ್ಕೆ ಸೂಕ್ತ ರಕ್ಷಣೆ ಹಾಗೂ ನ್ಯಾಯಯುತವಾದ ಪರಿಹಾರ ಒದಗಿಸಬೇಕೆಂದು ವಿಜಯಕುಮಾರ್ ಒತ್ತಾಯಿಸಿದರು. ರಾಜ್ಯಪಾಲರಿಗೆ ಬರೆದ ಮನವಿಯನ್ನು ಗ್ರಾಮಲೆಕ್ಕಾಧಿಕಾರಿ ಯೇಸಪ್ಪಗೆ ಸಲ್ಲಿಸಲಾಯಿತು.