ಹಾಸನ : ಆರ್ಎಸ್ಎಸ್ ಕಾರ್ಯಕರ್ತ ಐನೆಟ್ ವಿಜಯಕುಮಾರ್ ಅವರ ಮೇಲೆ ನಡೆದಿರುವ ಹಲ್ಲೆಯಿಂದ ಬ್ರಾಹ್ಮಣ ಸಮುದಾಯ ಆತಂಕದಲ್ಲಿದ್ದು, ಪೊಲೀಸರು ಸೂಕ್ತ ರಕ್ಷಣೆ ನೀಡಬೇಕೆಂದು ನಗರ ಬ್ರಾಹ್ಮಣ ಸಭಾ ನಿರ್ದೇಶಕ ಡಾ.ಎನ್.ರಮೇಶ್ ಆಗ್ರಹಿಸಿದರು.
ಕಡಿಮೆ ಜನಸಂಖ್ಯೆಯಿರುವ ಬ್ರಾಹ್ಮಣರ ಮೇಲೆ ಹಲ್ಲೆ ಮಾಡಿದರೆ ಯಾರೂ ಪ್ರಶ್ನಿಸುವುದಿಲ್ಲ ಎಂಬ ಮನೋಭಾವದಿಂದ ಹಲ್ಲೆ ನಡೆಸಲಾಗಿದೆ. ಪೊಲೀಸ್ ಇಲಾಖೆ ನಮ್ಮ ಸಮಾಜದ ನಾಯಕರಿಗೆ ಭದ್ರತೆ ಕಲ್ಪಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಈಶ ಮಾತನಾಡಿ, ಐನೆಟ್ ವಿಜಯಕುಮಾರ್, ಬಿ.ಆರ್.ವರುಣ್, ಈಶ್ವರ್ ಹಾಗೂ ಮತ್ತೊಬ್ಬನ ಮೇಲೆ ಜೀವ ಬೆದರಿಕೆ ಇರುವ ವಿಚಾರ ಮೊದಲೇ ಗೊತ್ತಿತ್ತು. ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಕೆಲಸ ಮಾಡುತ್ತಿರುವುದನ್ನು ವಿರೋಧಿಸಿ 15 ದಿನಗಳಿಂದ ಬೆದರಿಕೆ ಕರೆಗಳು ಬರುತ್ತಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಏಕಾಏಕಿ ಗುಂಪಿನಲ್ಲಿ ಬಂದು ಈ ರೀತಿ ಹಲ್ಲೆ ಮಾಡುತ್ತಾರೆಂಬ ಕಲ್ಪನೆ ಇರಲಿಲ್ಲ. ಕೆಲ ದಿನಗಳ ಹಿಂದಷ್ಟೇ ಬೇಲೂರು ಶಾಸಕ ಎಚ್.ಕೆ.ಸುರೇಶ್ಗೆ ಜೀವ ಬೆದರಿಕೆ ಇರುವ ಕುರಿತು ಹೇಳಿದಾಗ ಅವರು ಪೊಲೀಸ್ ವರಿಷ್ಠಾಧಿಕಾರಿಗೆ ಕರೆ ಮಾಡಿ ಈ ನಾಲ್ಕು ಜನರಿಗೆ ರಕ್ಷಣೆ ನೀಡಬೇಕೆಂದು ಸೂಚಿಸಿದ್ದರು. ಆದರೆ ಪೊಲೀಸರು ಸಹ ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ದೂರಿದರು.
ಈ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಬೆಂಬಲಿಸುತ್ತಿದ್ದಾರೆ ಎಂಬ ಕಾರಣಕ್ಕೆ ಹಲ್ಲೆ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ಬಿಡುಗಡೆ ಮಾಡಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಬದಲು ರಕ್ಷಿಸಿದರೆ ನ್ಯಾಯ ಸಿಗುವುದು ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರ ಬ್ರಾಹ್ಮಣ ಸಭಾ ಅಧ್ಯಕ್ಷ ವೆಂಕಟೇಶ್, ನಗರಸಭೆ ಮಾಜಿ ಸದಸ್ಯ ಶ್ರೇಯಸ್, ರವಿ ಪ್ರಸಾದ್ ಇದ್ದರು.