ಕೋಲಾರ: ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಒಕ್ಕಲಿಗ ಸಮುದಾಯವನ್ನು ನಿಂದಿಸಿರುವ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ ಎಚ್ಚರಿಕೆ ನೀಡಿದರು.
ನಗರದ ಪತ್ರರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಸಂಸ್ಕೃತ ಸಮುದಾಯದಲ್ಲಿ ಜನಿಸಿರುವ ರಮೇಶ್ಕುಮಾರ್ ಸರ್ವಜನಿಕರ ಜೀವನದಲ್ಲಿ ಹಲವು ಹುದ್ದೆ ನಿಭಾಯಿಸಿದ್ದಾರೆ. ಸಾರ್ವಜನಿಕರ ನಡುವೆ ಹೇಗೆ ಮಾತನಾಡಬೇಕು ಎಂಬ ಅರಿವು ಇಲ್ಲವೇ ಎಂದು ಪ್ರಶ್ನಿಸಿದರು.
ಒಕ್ಕಲುತನ ಎನ್ನುವುದು ಅನ್ನಕೊಡುವ ಪರಂಪರೆಯಾಗಿದೆ. ರೈತರು ಪ್ರಕೃತಿಯನ್ನು ಕಾಪಾಡಿಕೊಂಡು ಬಂದಿರುವ ಆರಾಧಕರು. ಆಹಾರ ಧಾನ್ಯಗಳನ್ನು ಬೆಳೆದು ಅತ್ಯಂತ ಶ್ರೇಷ್ಠವಾದ ವೃತ್ತಿ ಮಾಡುವ ಒಕ್ಕಲಿಗರನ್ನು ವೈಯುಕ್ತಿಕ ವಿಚಾರಕ್ಕೆ ಅಪಮಾನಿಸಿ, ನಿಂದಿಸಿರುವುದು ಸಮಂಜಸವಲ್ಲ ಎಂದು ಬೇಸರಿಸಿದರು
ವಿಧಾನಸಭೆಯಲ್ಲಿ ಸೋಲುಂಟಾಗಿರುವ ಹತಾಶೆಯಲ್ಲಿ ರಮೇಶ್ಕುಮಾರ್ , ಚುನಾವಣೆ ಭಾಷಣದಲ್ಲಿ ಒಕ್ಕಲಿಗರು ಹೊಟ್ಟೆಗೆ ಏನು ತಿನ್ನುತ್ತೀರಿ ಎಂದು ಪ್ರಶ್ನಿಸುವ ಮೂಲಕ ಇಡೀ ಸಮುದಾಯವನ್ನೇ ನಿಂದಿಸಿದ್ದಾರೆ, ನೀವು ಏನು ತಿಂತೀರೊ ನಾವು ಅದನ್ನೇ ಸೇವಿಸುವುದು ಎಂದು ತಿರುಗೇಟು ನೀಡಿದ್ದಾರೆ.
ನೀವು ಹೊಟ್ಟೆಗೆ ಊಟ ಸೇವಿಸಬೇಕಾದರೆ ಒಕ್ಕಲಿಗರು ಬೆಳೆದು ಕೊಡಬೇಕು. ಅವರಿಗೆ ಯಾರೂ ವಂಚಿಸಿದ್ದಾರೋ ಅವರ ವಿರುದ್ಧ ನೇರವಾಗಿ ಟೀಕಿಸಲಿ. ಇದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ, ಇಡೀ ಸಮುದಾಯವನ್ನು ನಿಂದಿಸುವ ನೈತಿಕತೆ ರಮೇಶ್ಕುಮಾರ್ಗಿಲ್ಲ ಎಂದರು.
ಮುಖಂಡರಾದ ಸಿಎಂಆರ್ ಶ್ರೀನಾಥ್, ಮ್ಯಾಗೇರಿ ನಾರಾಯಣಸ್ವಾಮಿ, ಹರೀಶ್ ಗೌಡ, ಪವನ್ ನಾರಾಯಣಸ್ವಾಮಿ, ಚೌಡರೆಡ್ಡಿ, ರಾಮಚಂದ್ರೇಗೌಡ, ಜಯಲಕ್ಷ್ಮಿ ಇದ್ದರು.