ಮೈಸೂರು: ಕಲಾವಿದರು ತಮ್ಮದೇ ಕ್ಷೇತ್ರದ ಇತರ ಕಲಾವಿದರನ್ನು ಗುರುತಿಸುವ, ಒಳ್ಳೆಯದನ್ನು ಮತ್ತಷ್ಟು ಪ್ರೋತ್ಸಾಹಿಸುವಲ್ಲಿ ಗಮನ ಹರಿಸಬೇಕು ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಹೇಳಿದರು.
ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಸಂವಹನ ಮತ್ತು ಪತ್ರಿಕೋದ್ಯಮ ಶಿಕ್ಷಕರ ಸಂಘದಿಂದ ಪ್ರದರ್ಶನ ಕಲೆ ಮತ್ತು ಮಾಧ್ಯಮ ಸಾಂಸ್ಕೃತಿಕ ದೃಷ್ಠಿಕೋನಗಳು ವಿಷಯವಾಗಿ ಆಯೋಜಿಸಿದ್ದ ಎರಡು ದಿನಗಳ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಹುತೇಕ ಕಲಾವಿದರೂ ತಮ್ಮದೇ ಚೌಕಟ್ಟು ನಿರ್ಮಿಸಿಕೊಂಡು ಅದಕ್ಕೆ ಜೋತು ಬಿದ್ದಿರುತ್ತಾರೆ. ಹಾಗಾಗಿ ವಿಶಾಲ ಮನೋಭಾವ ರೂಢಿಸಿಕೊಂಡು ಇತರರನ್ನು ಉತ್ತೇಜಿಸುವ ಕೆಲಸ ಮಾಡಬೇಕಿದೆ ಎಂದರು. ಸಂಗೀತ ವಿವಿ ಬಗ್ಗೆ ಕೆಲ ಟೀಕೆ, ಟಿಪ್ಪಣಿಗಳು ಬರುತ್ತಿವೆ. ಅವುಗಳನ್ನು ನಿವಾರಿಸಿಕೊಂಡು ವಿವಿ ಬೆಳವಣಿಗೆಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಮಾತನಾಡಿ, ಸಂಗೀತ, ನೃತ್ಯ, ನಾಟಕಕ್ಕೆ ಮಾಧ್ಯಮದಲ್ಲಿ ಹಿಂದೆ ಸಿಗುತ್ತಿದ್ದಷ್ಟು ಮಾನ್ಯತೆ ಈಗ ಇಲ್ಲವಾಗಿದೆ. ಟಿವಿಗಳ ಅಬ್ಬರದಲ್ಲಿ ಇವುಗಳಿಗೆ ಜಾಗವೇ ಇಲ್ಲದಂತಾಗಿದೆ. ಮುದ್ರಣ ಮಾಧ್ಯಮದಲ್ಲಿ ಮಾತ್ರ ಕೊಂಚ ಸ್ಥಳ ನೀಡಲಾಗುತ್ತಿದೆ ಎಂದರು.
ಪುಸ್ತಕ ಓದುವ ಹವ್ಯಾಸ ವಿದ್ಯಾರ್ಥಿಗಳಲ್ಲಿ ಕಡಿಮೆ ಆಗಿದೆ. ಎಲ್ಲವನ್ನೂ ಗೂಗಲ್, ಸಾಮಾಜಿಕ ಜಾಲತಾಣದ ಮೊರೆ ಹೋಗಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಓದುವ ಆಸಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕಿದೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಬಿ.ವಿ.ರಾಜಾರಾಂ, ಬೆಂಗಳೂರಿನ ನ್ಯಾಕ್ ಮಾಜಿ ನಿರ್ದೇಶಕ ಪ್ರೊ.ಎಸ್.ಸಿ.ಶರ್ಮ, ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷ ಡಾ.ಕೃಪಾ ಫಡ್ಕೆ , ಸಂಗೀತ ವಿವಿ ಪ್ರಭಾರ ಕುಲಸಚಿವೆ ಕೆ.ಎಸ್.ರೇಖಾ ಇದ್ದರು.