ಬೆಂಗಳೂರು: ಯಲಹಂಕ ತಾಲೂಕಿನ ಮಾರಸಂದ್ರ ಪ್ಲಾಂಟೇಷನ್ ಬಳಿ ಚಿರತೆಯೊಂದು ಸೋಮವಾರ ಪ್ರತ್ಯಕ್ಷ್ಯವಾಗಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
ಬಾಗಲೂರು ಸಮೀಪದ ಎಂ.ಹೊಸಹಳ್ಳಿ-ಚಾಮಲಕುಂಟೆ ಪ್ರದೇಶದಲ್ಲಿ ಇಲ್ಲಿನ ಪ್ಲಾಂಟೇಷನ್ ಕಡೆಯಿಂದ ಸಂಜೆ 5.30ರ ವೇಳೆ ಚಿರತೆಯೊಂದು ತೋಟವೊಂದರ ಬಳಿ ಹಾದುಹೋಗಿದೆ. ಚಿರತೆ ಓಡಾಡುತ್ತಿದ್ದನ್ನು ಸ್ಥಳೀಯ ರೈತರು ನೋಡಿದ್ದಾರೆ. ಬಳಿಕ ಈ ವಿಷಯವನ್ನು ಗ್ರಾಮಸ್ಥರು ಬಾಗಲೂರು ಪೊಲೀಸ್ ಠಾಣೆ ಹಾಗೂ ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಇದೇ ಮೊದಲ ಬಾರಿಗೆ ಬಾಗಲೂರು ಬಳಿ ಚಿರತೆಯೊಂದು ಓಡಾಡಿದೆ. ದಿಢೀರ್ ಈಗ ಪ್ರತ್ಯಕ್ಷ್ಯವಾಗಲು ಕಾರಣ ತಿಳಿದಿಲ್ಲ. ಮಾರಸಂದ್ರ ಪ್ಲಾಂಟೇಷನ್ ಬಳಿ ಅರಣ್ಯ ಪ್ರದೇಶವಿದ್ದು, ಆ ಕಡೆಯಿಂದಲೇ ಚಿರತೆ ಬಂದಿರಬೇಕು. ರೈತರು ತಮ್ಮ ಹೊಲ, ತೋಟಗಳಿಗೆ ತೆರಳಲು ಮುಂಜಾಗ್ರತಾ ಕ್ರಮವಾಗಿ ಚಿರತೆಯನ್ನು ಹಿಡಿದು ಕಾಡಿಗೆ ಬಿಡುವ ವ್ಯವಸ್ಥೆ ಮಾಡಬೇಕಿದೆ ಎಂದು ಸ್ಥಳೀಯ ನಿವಾಸಿಯೂ ಆಗಿರುವ ಬೆಂಗಳೂರು ಕೃಷಿ ವಿವಿಯ ನಿವೃತ್ತ ನಿರ್ದೇಶಕ (ವಿಸ್ತರಣೆ ವಿಭಾಗ) ಡಾ. ಕೆ. ನಾರಾಯಣಗೌಡ ತಿಳಿಸಿದ್ದಾರೆ.