ಕೆ.ಆರ್.ಸಾಗರ: ಕೃಷ್ಣರಾಜಸಾಗರದ ಅಣೆಕಟ್ಟೆ ಬಳಿ ಪದೆಪದೇ ಕಾಣಿಸಿಕೊಂಡು ಪ್ರವಾಸಿಗರು ಮತ್ತು ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದ್ದು, ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ಅ.22ರ ಬೆಳಗ್ಗೆ ಕಾವೇರಿ ನೀರಾವರಿ ನಿಗಮದ ಕೆಲಸಗಾರರು ಅಣೆಕಟ್ಟೆ ಬಳಿ ಗಿಡ-ಗಂಟಿ ತೆರವು ಮಾಡುತ್ತಿದ್ದಾಗ ದಕ್ಷಿಣ ದ್ವಾರದ ಬಳಿಯ ನಗುವನ ತೋಟದಿಂದ ಅಣೆಕಟ್ಟೆ ಮೇಲೆ ಚಿರತೆ ಹೋಗುತ್ತಿರುವುದನ್ನ ಕಂಡು ಮೇಲಧಿಕಾರಿಗಳಿಗೆ ತಿಳಿಸಿದ್ದರು. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಚಿರತೆಯ ಹೆಜ್ಜೆ ಗುರುತುಗಳು ಕಂಡು ಬಂದಿತ್ತು. ಅಂದು ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.
ಇದಾದ ಮರುದಿನ ಕೂಡ ಚಿರತೆ ಕಾಣಿಸಿಕೊಂಡಿತ್ತು. ಸಿಸಿ ಟಿವಿಯಲ್ಲಿ ಈ ದೃಶ್ಯ ಸೆರೆಯಾಗಿತ್ತು. ಆ ವಾರದಲ್ಲೇ ಮೂರು ಬಾರಿ ಚಿರತೆ ಕಾಣಿಸಿಕೊಂಡಿತ್ತು. ಚಿರತೆ ಸೆರೆಗೆ ಅರಣ್ಯ ಇಲಾಖೆಯು ಬೋನ್ ಇರಿಸಿ, ಕೂಂಬಿಂಗ್ ಕಾರ್ಯಾಚರಣೆ ನಡೆಸಿತ್ತು. ಆ ವೇಳೆ ಕಾಣಿಸಿಕೊಳ್ಳದ ಚಿರತೆ, ಅ.28 ಸಂಜೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಹೀಗೆ ಮೂರು ತಿಂಗಳಿನಿಂದ ಡ್ಯಾಂ ಸುತ್ತ ಬೃಂದಾವನ ಬಳಿ ಸಂಚರಿಸುತ್ತಿದ್ದ ಚಿರತೆ, ಅಕ್ಕ ಪಕ್ಕದ ಗ್ರಾಮಗಳಲ್ಲಿ ಬೀದಿನಾಯಿ ಹಾಗೂ ಸಾಕುಪ್ರಾಣಿಗಳನ್ನ ಬೇಟೆಯಾಡಿ ಆತಂಕ ಹುಟ್ಟಿಸಿತ್ತು. ಹಾಗಾಗಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.
ಚಿರತೆ ಸೆರೆಗಾಗಿ ಅರಣ್ಯ ಇಲಾಖೆಯು ಡ್ಯಾಂ ಸುತ್ತಮುತ್ತ 8 ಬೋನ್ ಇರಿಸಿತ್ತು. ಟ್ರಾಪ್ ಕ್ಯಾಮೆರಾ ಅಳವಡಿಸಿ ಚಿರತೆ ಹಿಡಯಲು ಹರಸಾಹಸ ಪಟ್ಟಿತ್ತು. ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ರೂ ಸಿಗದೆ ಕಣ್ಣಮುಚ್ಚಾಲೆ ಆಡುತ್ತಿದ್ದ ಚಿರತೆ, 3 ತಿಂಗಳ ಬಳಿಕ ಬೋನಿಗೆ ಬಿದ್ದಿದೆ. ಚಿರತೆ ಸಿಕ್ಕ ಸುದ್ದಿ ಕೇಳಿ ಸಿಬ್ಬಂದಿ ಮತ್ತು ಸುತ್ತಮುತ್ತಲ ಜನರು ನಿಟ್ಟುಸಿರುಬಿಟ್ಟಿದ್ದಾರೆ.
ಕಚ್ಚಿದ ಹಾವನ್ನೇ ಜೀವಂತವಾಗಿ ಹಿಡಿದುಕೊಂಡು ಆಸ್ಪತ್ರೆಗೆ ಬಂದ ಭೂಪ! ತರೀಕೆರೆಯಲ್ಲಿ ಘಟನೆ